ಬೆಳಗಾವಿ: ಸದನದಲ್ಲಿ ಸೆಕ್ಸ್ಫಿಲಂ ವೀಕ್ಷಿಸಿದ್ದೂ ಎಷ್ಟು ದುರ್ದೈವವೋ, ಅದನ್ನು ನಿರಂತರವಾಗಿ ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸಿದ್ದೂ ಅದಕ್ಕಿಂತ ದುರ್ದೈವದ ಸಂಗತಿಯಾಗಿದೆ ಎಂದು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ವಿಷಾದಿಸಿದರು.
ನಗರದ ಆರ್ಪಿಡಿ ಕಾಲೇಜಿನ ಬಳಿ ಇರುವ ವಿದ್ಯಾರ್ಥಿನಿಲಯ ಆವರಣದಲ್ಲಿ ಶನಿವಾರ ಅವರು ಕೃಷ್ಣ ಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.`ಮಾಜಿ ಸಚಿವರು ಸದನದಲ್ಲಿ ಒಂದು ಬಾರಿ ನೋಡಿದ್ದರು. ಆದರೆ ಅದನ್ನು ಮೂರು ದಿನಗಳ ಕಾಲ ಬಿತ್ತರಿಸುವಅಗತ್ಯವಿತ್ತೇ? ಅದರಿಂದ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮಾಧ್ಯಮಗಳವರು ಚಿಂತಿಸಿದ್ದಾರೆಯೇ~ ಎಂದು ಅವರುಪ್ರಶ್ನಿಸಿದರು.
`ಸುದ್ದಿ ವಾಹಿನಿಗಳು ಅಂದಿನ ಅಶ್ಲೀಲ ದೃಶ್ಯಗಳನ್ನು ಬಿತ್ತರಿಸಿದ್ದನ್ನು ನೋಡಿದರೆ ಮಾಧ್ಯಮದ ಮೇಲೆ ನಿಯಂತ್ರಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ~ ಅಂದು ಅವರು ಅಭಿಪ್ರಾಯಪಟ್ಟರು.ಅಂತಹ ದೃಶ್ಯಗಳನ್ನು ಬಿತ್ತರಿಸುವುದರಿಂದ ಮಕ್ಕಳ ಹಾಗೂ ಯುವಕರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗೆಗೂ ಚಿಂತನೆ ಆಗಬೇಕು~ ಎಂದು ಅವರು ಹೇಳಿದರು.
ಮೊಬೈಲ್ ಮೂಲಕ ಇಂತಹ ದೃಶ್ಯಗಳು ಹರಿದಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ~ ಎಂದರು.