ಸುವರ್ಣ ವಿಧಾನಸೌಧ (ಬೆಳಗಾವಿ): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅವಿವಾಹಿತರಾಗಿ ಉಳಿದಿರುವುದೇ ಅವರು ಕಾವೇರಿ ವಿಷಯದಲ್ಲಿ ಪದೇ ಪದೇ ರಾಜ್ಯದ ಜೊತೆ ಸಂಘರ್ಷಕ್ಕೆ ಇಳಿಯಲು ಕಾರಣವೇ?
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ವಿಧಾನಸಭೆಯ ಮುಂದಿಟ್ಟ ಈ ಪ್ರಶ್ನೆ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ದಾರಿಯಾಯಿತು. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಸಿದ್ದರಾಮಯ್ಯ ಇಂತಹ ಸಂಶಯ ವ್ಯಕ್ತಪಡಿಸಿದರು.
`ಕರುಣಾನಿಧಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ವೇಳೆ ಇಂತಹ ಸಮಸ್ಯೆ ಆಗಿರುವುದು ಕಡಿಮೆ. ಕುಮಾರಿ ಜಯಲಲಿತಾ ಅಧಿಕಾರದಲ್ಲಿ ಇರುವಾಗ ಮಾತ್ರ ಈ ಸಮಸ್ಯೆ ಎದುರಾಗುತ್ತದೆ. ಅವರು ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ಅವರೊಬ್ಬ `ಅನ್ರೀಸನಬಲ್ ವಿಮೆನ್'. ಬಹುಶಃ ಮದ್ವೆ ಆಗ್ದೆ ಇರೋದೇ ಕಾರಣವೋ ಏನೋ' ಎಂದರು.
`ಮೇಲುಕೋಟೆ ಕಾರಣ' ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಹೇಳಿದರು. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, `ಅವ್ರ (ಜಯಲಲಿತಾ) ನಮ್ಮ ಕ್ಷೇತ್ರದವರು' ಎಂದರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿ, `ಹೌದು. ಮೇಲುಕೋಟೆಯಲ್ಲಿ ಹುಟ್ಟಿದವರು ಅವರು. ಇಲ್ಲಿನ ಸಮಸ್ಯೆ ಎಲ್ಲಾ ಗೊತ್ತು. ಆದರೂ ಹೀಗೆ ಮಾಡ್ತಾರಲ್ಲಾ. ಅಲ್ಲಿ ಹುಟ್ಟಿದ್ದು ಕೂಡ ಇದಕ್ಕೆ ಕಾರಣವಾ?' ಎಂದು ಮತ್ತೊಂದು ಪ್ರಶ್ನೆ ಹಾಕಿದರು.