ಮೈಸೂರು: ಸಿದ್ದರಾಮಯ್ಯನವರು ಒಬ್ಬ ಸಣ್ಣ ರಾಜಕಾರಣಿಯಲ್ಲ. ಅವರು ಒಬ್ಬ ಧೀಮಂತ ನಾಯಕ ಎಂದು ಹಿರಿಯ ಸಾಹಿತಿ ಡಾ. ಸಾ.ಶಿ. ಮರುಳಯ್ಯ ಹೇಳಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಮಾನಸ ಅವರು ಸಂಪಾದಿಸಿದ `ಸದನದಲ್ಲಿ ಸಿದ್ದರಾಮಯ್ಯ' ಕೃತಿಯನ್ನು ಬಿಡುಗಡೆ ಮಾಡಿದ ಅವರು ಮಾತನಾಡಿದರು.
`ಒಬ್ಬ ವ್ಯಕ್ತಿಗೆ ಒಂದು ಮುಖ ಮತ್ತು ವ್ಯಕ್ತಿತ್ವಕ್ಕೆ ನಾನಾ ಮುಖಗಳಿರುತ್ತವೆ. ಅಂತಹ ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯನವರೂ ಇದ್ದಾರೆ. ಕರ್ನಾಟಕ ಕಾವಲು ಸಮಿತಿಯ ಮೂಲಕ ಕನ್ನಡ ಸಂಸ್ಕೃತಿ ರಕ್ಷಿಸಿದ ಅವರು ವಿತ್ತ ಸಚಿವರಾಗಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕರ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ' ಎಂದರು.
`ಕರುನಾಡು ಎನ್ನುವುದು ಸಮುದ್ರದಿಂದ ಎತ್ತರದಲ್ಲಿರುವ ಪ್ರದೇಶ ಎಂದು ಅರ್ಥ. ಕಳ್ಳ-ಅರು ಎಂದರೆ ಸಿಂಧೂ ನದಿ ಪ್ರಾಂತ್ಯದಿಂದ ಬಂದವರು. ಕಳ್ಳು ಎಂದರೆ ಹಾಲು, ಹೆಂಡ ಎಂಬ ಅರ್ಥ ಬರುತ್ತದೆ. ಹಾಲು, ಹೈನು ಉತ್ಪಾದನೆ ಮಾಡುವ ಮತದವರು ಅವರು. ಅವರನ್ನು ಕಳ್ಳ-ಅರು ಎನ್ನುತ್ತಿದ್ದರು. ಕಳ್ಳು ಎಂದರೆ ಕರುನಾಡಿನ ಮೂಲನಿವಾಸಿಗಳು ಹಾಲುಮತದವರು. ಅಂತಹ ಹಾಲುಮತದ ಮಹಾನ್ ದಾರ್ಶನಿಕ, ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು. ಅದೇ ಜನಾಂಗದಲ್ಲಿ ಜನಿಸಿದವರು ಸಿದ್ದರಾಮಯ್ಯ. ಅವರ ಆಸಕ್ತಿಯಿಂದಲೇ ಕಾಗಿನೆಲೆ ಕನಕಪೀಠ ಎದ್ದು ನಿಂತಿದ್ದು ನಾಡಿಗೇ ಗೊತ್ತಿದೆ' ಎಂದರು.
ಹಿರಿಯ ಪತ್ರಕರ್ತ ಶೈಲೇಶಚಂದ್ರ ಗುಪ್ತ, ಚಲನಚಿತ್ರ ನಟ ಅಂಬರೀಷ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೃತಿಯ ಸಂಪಾದಕ ಮಾನಸ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಗೌರವ ಕಾರ್ಯದರ್ಶಿಗಳಾದ ಡಾ. ವೈ.ಡಿ. ರಾಜಣ್ಣ, ಕೆ.ಎಸ್. ಶಿವರಾಮ್, ಖಜಾಂಚಿ ರಾಜಶೇಖರ ಕದಂಬ, ಸಂಚಾಲಕ ಮೂಗೂರು ನಂಜುಂಡಸ್ವಾಮಿ, ರಂಗನಾಥ್ ಮೈಸೂರು, ಮಡ್ಡೀಕೆರೆ ಗೋಪಾಲ್ ಮತ್ತಿತರರು ಹಾಜರಿದ್ದರು.