ತರೀಕೆರೆ: ಬಗ್ಗವಳ್ಳಿ ಕ್ಷೇತ್ರದ ತಾ.ಪಂ. ಸದಸ್ಯ ರಾಜ್ ಕುಮಾರ್ ಅವರು ಸತತವಾಗಿ ಸಾಮಾನ್ಯ ಸಭೆಗೆ ಹಾಜರಾಗದೇ, ಸಭಾ ನಡವಳಿ ಪುಸ್ತಕದಲ್ಲಿ ಮಾತ್ರ ಸಹಿ ಹಾಕಿರುವುದನ್ನು ವಿರೋಧಿಸಿ, ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಮತ್ತು ಸಭಾ ನಡವಳಿಕೆ ಪುಸ್ತಕಕ್ಕೆ ಸಹಿ ಪಡೆದಿರುವ ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿ ತಾ.ಪಂ. ಸದಸ್ಯರಾದ ಸೀತಾರಾಂ, ವಿಜಯನಾಯ್ಕ ಮತ್ತಿತರರು ಸಭಾಧ್ಯಕ್ಷರ ವೇದಿಕೆ ಬಳಿ ಪ್ರತಿಭಟಿಸಿದ ಘಟನೆ ನಡೆಯಿತು.
10 ತಿಂಗಳಲ್ಲಿ 7 ಸಾಮಾನ್ಯ ಸಭೆ ನಡೆದಿದ್ದು, ಕೇವಲ ಒಂದು ಸಭೆಗೆ ಮಾತ್ರ ರಾಜ್ ಕುಮಾರ್ ಬಂದಿದ್ದು, ಉಳಿದ ಸಭೆಗೆ ಆಗಮಿಸದೇ ಸಭಾ ನಡವಳಿಕೆಗೆ ಸಹಿ ಮಾಡಿರುವುದು, ಇದಕ್ಕೆ ಅಧಿಕಾರಿಗಳು ಸಹಕರಿಸಿರುವುದು ಕಾನೂನು ಬಾಹಿರ ಎಂದರು.
ಬುಧವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುಮಾರು 2 ತಾಸುಗಳ ವರೆಗೆ ಈ ವಿಚಾರವಾಗಿ ಚರ್ಚೆ ನಡೆಯಿತಾದರೂ ಯಾವುದೇ ನಿರ್ಧಾರಕ್ಕೆ ಸಭೆ ಬರದ ಕಾರಣ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ದೇವರಾಜ್ ಮತ್ತು ಅಧ್ಯಕ್ಷೆ ಶಾಂತ ದೂರವಾಣಿ ಮೂಲಕ ಗೈರು ಹಾಜರಾಗಿದ್ದು ಸದಸ್ಯ ರಾಜ್ ಕುಮಾರ್ ಅವರನ್ನು ಸಭೆಗೆ ಕರೆಸಿಕೊಂಡದ್ದನ್ನು ಪ್ರಬಲವಾಗಿ ವಿರೋಧಿಸಿದ ಹಲವು ಸದಸ್ಯರು ಸೀತಾರಾಮ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು. ಸಭೆಗೆ ಹಾಜರಾದ ರಾಜ್ ಕುಮಾರ್ ಈ ಬಗ್ಗೆ ಸಮರ್ಪರ್ಕ ಉತ್ತರ ನೀಡದೇ, ಕ್ರಮಕ್ಕೆ ಮುಂದಾದಲ್ಲಿ ಅದನ್ನು ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದರು.
ಪ್ರತಿಭಟನೆಯ ತೀವ್ರತೆ ಅರಿತ ಅಧ್ಯಕ್ಷರು ಕೂಡಲೇ ಕ್ರಮಕ್ಕೆ ಮುಂದಾಗುವುದಾಗಿ ರೂಲಿಂಗ್ ನೀಡಿದ ನಂತರ ಸಭೆ ಮುಂದುವರಿಯಿತಾದರೂ ಅಂತಿಮ ಕ್ಷಣದವರೆಗೆ ಸಭಾಧ್ಯಕ್ಷರು ಯಾವುದೇ ನಿರ್ಣಯ ತೆಗೆದುಕೊಳ್ಳಲು ವಿಫಲರಾದರು.
ಇನ್ನೊಬ್ಬ ಸದಸ್ಯ ವಿಜಯನಾಯ್ಕ ತಾಲ್ಲೂಕು ಪಂಚಾಯಿತಿಗೆ ಬರುವ ಅನುದಾನ ಕುರಿತಂತೆ ಸ್ಪಷ್ಟ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ಸಭೆಗೆ ಮಾಹಿತಿ ನೀಡಿ ಮಕ್ಕಳ ಸಮವಸ್ತ್ರಕ್ಕಾಗಿ ಸರ್ಕಾರ 29 ಲಕ್ಷ ಹಣ ಬಿಡುಗಡೆ ಮಾಡಿದ್ದು ಪ್ರತಿ ಮಕ್ಕಳಿಗೆ ಸಿದ್ಧ ಉಡುಪು ನೀಡಲು 200 ರೂ ಗಳನ್ನು ನಿಗಧಿ ಮಾಡಿದೆ. ಆದರೆ ಸದರಿ ಹಣದಲ್ಲಿ ಸಮವಸ್ತ್ರ ನೀಡುವುದು ಕಷ್ಟ ಸಾಧ್ಯ ಎಂದು ಸಭೆಗೆ ತಿಳಿಸಿದರು.
ಇನ್ನೊಬ್ಬ ಸದಸ್ಯ ವಿರೂಪಾಕ್ಷಪ್ಪ ಮಾತನಾಡಿ, ಕೆಲವು ಶಿಕ್ಷಕರು ಶಾಲೆಗಳಿಗೆ ಸರಿಯಾಗಿ
ಹಾಜರಾಗದೇ ತಮ್ಮ ತೋಟ ಮತ್ತು ಜಮೀನಿನ ಹೋಗುತ್ತಿರುವುದು ಸಾಮಾನ್ಯವಾಗಿದೆ. ಕೆಲವರು ಒಂದೇ ಶಾಲೆಯಲ್ಲಿಯೇ 10 ರಿಂದ 15 ವರ್ಷಗಳಿಂದ ಇದ್ದು ಯಾರ ಮಾತು ಕೇಳದಂತಹ ಪರಿಸ್ಥಿತಿ ತಲೆದೂರಿದ್ದು ಈ ಬಗ್ಗೆ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಕೆಲವರಂತೂ ಮೊಬೈಲ್ ಹಿಡಿದುಕೊಂಡೇ ಪಾಠ ಮಾಡುತ್ತಾ ವ್ಯವಹಾರ ನಡೆಸುವುದು ಮಾಮೂಲಿ ಆಗಿದೆ. ಹಾಗಾಗಿ ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್ ಬಳಕೆ ನಿಷೇದಿಸುವಂತೆ ಸೀತಾರಂ ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಗೌರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಕಾರ್ಯನಿರ್ವಾಹಣಾಧಿಕಾರಿ ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.