ರಾಮನಗರ: ಜಿಲ್ಲೆಯಾದ್ಯಂತ ಎರಡು ವರ್ಷದಿಂದ ಎದುರಾಗಿದ್ದ ತೀವ್ರ ಬರಗಾಲ ಈಗಿಲ್ಲ ಎಂಬುದನ್ನು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಎರೇಹಳ್ಳಿ ಗ್ರಾಮದ ಕೊಳವೆ ಬಾವಿಯೊಂದು ಸಾರಿ ಸಾರಿ ಹೇಳುತ್ತಿದೆ!
ಪಂಪ್, ಮೋಟಾರು ಅಥವಾ ವಿದ್ಯುತ್ ಸಂಪರ್ಕವೇ ಇಲ್ಲದೆ ಇಲ್ಲಿನ ಕೊಳವೆ ಬಾವಿಯಿಂದ ನೀರು ಸದಾ ಹೊರಕ್ಕೆ ಚಿಮ್ಮುತ್ತಿದೆ. ಇದರಿಂದ ಗ್ರಾಮದ ಜನರು ಸಂತಸಗೊಂಡಿದ್ದಾರೆ. ಸದಾ ನೀರು ತುಂಬಿ ಹರಿಯುವುದರಿಂದ ಆ ನೀರು ಹೊಳೆಗೆ ಸೇರುವ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದಾರೆ.
`ಗ್ರಾಮದಲ್ಲಿ 70ರಿಂದ 80 ಮನೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಇದನ್ನು ಅರಿತು ಒಂದೂವರೆ ತಿಂಗಳ ಹಿಂದೆ ಈ ಕೊಳವೆ ಬಾವಿ ಕೊರೆಸಲಾಯಿತು. ಇಲ್ಲಿ ಹೆಚ್ಚಿನ ಪ್ರಮಾಣದ ನೀರು ದೊರೆತಿದೆ. ಆದರೆ ನೀರಿನ ವೇಗ ಹೆಚ್ಚಿರುವ ಕಾರಣ ಪಂಪು, ಮೋಟಾರು ನೆರವಿಲ್ಲದೆ ನೀರು ಹೊರ ಚಿಮ್ಮುತ್ತಿದೆ' ಎಂದು ಗ್ರಾಮದ ನಿವಾಸಿ ವೆಂಕಟೇಶ್ ತಿಳಿಸಿದರು.
`ಕೊಳವೆ ಬಾವಿ ಬಳಿಯೇ ಸುವರ್ಣ ಮುಖಿ ನದಿ ಹರಿಯುವ ಹೊಳೆ ಇರುವ ಕಾರಣ ಇದರ ನೀರನ್ನು ಹೊಳೆಗೆ ಹರಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ವಿದ್ಯುತ್ ಇರಲಿ, ಇಲ್ಲದಿರಲಿ ಈ ಕೊಳವೆ ಬಾವಿಯಿಂದ ಮಾತ್ರ ನೀರು ಬರುತ್ತಿದೆ. ಇದರಿಂದ ಗ್ರಾಮದ ಜನರಿಗೆ ಅನುಕೂಲವಾಗಿದೆ. ಪಂಚಾಯಿತಿಯವರು ಮೋಟಾರು, ಪಂಪ್ ಅಳವಡಿಸುವ ಕೆಲಸ ಯಾವಾಗ ಮಾಡುತ್ತಾರೋ ಗೊತ್ತಿಲ್ಲ.
ಅಲ್ಲಿಯವರೆಗೆ ಹೀಗೆ ನೀರು ಬರಲಿ ಎಂಬುದು ಗ್ರಾಮದ ಜನರ ಕೋರಿಕೆಯಾಗಿದೆ' ಎಂದು ಅವರು ಹೇಳಿದರು.