ದಾವಣಗೆರೆ: ರಾಜ್ಯ ಪ್ರವಾಸ ಕೈಗೊಂಡ ಬಿ.ಎಸ್. ಯಡಿಯೂರಪ್ಪ ಹಾಗೂ ಆಡಳಿತ ಚುರುಕುಗೊಳಿಸಲು ಯತ್ನಿಸುತ್ತಿರುವ ಡಿ.ವಿ. ಸದಾನಂದಗೌಡ ನಡುವೆ ಕೋರ್ ಕಮಿಟಿ ಸಭೆ ನಂತರವೂ ಸಮನ್ವಯ ಉಂಟಾಗಿಲ್ಲವೇ? ದಿನೇ ದಿನೇ ವೈಮನಸ್ಸು ಹೆಚ್ಚಾಗುತ್ತಿದೆಯೇ? -ಶನಿವಾರ ನಗರದಲ್ಲಿ ನಡೆದ ಬೆಳವಣಿಗೆ ಈ ಪ್ರಶ್ನೆಗೆ ಕಾರಣವಾಯಿತು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಬೆಂಗಳೂರಿನಿಂದ ನಗರಕ್ಕೆ ಹೆಲಿಕಾಪ್ಟರ್ನಲ್ಲಿ ಬಂದರು. ಇದೇ ಕ್ಯಾಂಪಸ್ನಲ್ಲಿರುವ ಪ್ರವಾಸಿ ಮಂದಿರಕ್ಕೆ ರಸ್ತೆ ಮಾರ್ಗವಾಗಿ ಬಂದಿದ್ದ ಯಡಿಯೂರಪ್ಪನವರ ಜತೆಯಲ್ಲಿಯೇ ಉಪಾಹಾರ ಸೇವಿಸಿದರು. ಆದರೆ, ಇಬ್ಬರೂ ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನಾಡಲಿಲ್ಲ.
ಸದಾನಂದಗೌಡರು ಹೆಲಿಪ್ಯಾಡ್ನಲ್ಲಿ, ಯಡಿಯೂರಪ್ಪ ಜಿಎಂಐಟಿ ಪ್ರವಾಸಿ ಮಂದಿರದಲ್ಲಿ ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಬರುವವರೆಗೂ, ಹಾಲ್ನಲ್ಲಿ ಗೌಡರು ಪಾಲಿಕೆ ಸದಸ್ಯರು ಸ್ಥಳೀಯರೊಂದಿಗೆ ಮಾತನಾಡುತ್ತಾ ಕಾದರು. ನಂತರವಷ್ಟೇ ಜತೆಯಲ್ಲಿಯೇ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು. ನಂತರ ಡಿ. ದೇವರಾಜ ಅರಸು ಬಡಾವಣೆಯಲ್ಲಿ ಅಶ್ವಾರೂಢ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಬ್ಬರೂ, ಅಕ್ಕಪಕ್ಕದ ಆಸನದಲ್ಲಿಯೇ ಕುಳಿತರೂ ಒಮ್ಮೆಯೂ ಮಾತನಾಡಲಿಲ್ಲ.
ಯಡಿಯೂರಪ್ಪ ಬಲಗಡೆ ಇದ್ದ ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ಜತೆ ಮಾತನಾಡುತ್ತಿದ್ದರೆ, ಡಿ.ವಿ. ಸದಾನಂದಗೌಡರು ಪಕ್ಕದಲ್ಲಿದ್ದ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಜತೆ ಮಾತನಾಡುತ್ತಿದ್ದರು.