ಯಲಬುರ್ಗಾ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದು ಹಾಗೂ ಬೆಳಗಾವಿಯಲ್ಲಿ ಪೊಲೀಸರ ಅಮಾನವೀಯ ವರ್ತನೆಯನ್ನು ಖಂಡಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮಾದಿಗ ಸಮಾಜಕ್ಕೆ ಸರಿಯಾದ ನ್ಯಾಯ ಒದಗಿಸಿದ ಸದಾಶಿವ ವರದಿ ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ಮಾದಿಗ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ದೊರೆಯದೇ ವಂಚನೆಗೆ ಒಳಗಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಸಮಿತಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಸಂಘಟನೆಯ ಪದಾಧಿಕಾರಿಗಳಲ್ಲಿ ಅನೇಕರು ಮಾತನಾಡಿ, ಸರ್ಕಾರದ ವಿರುದ್ದ ಹಾಗೂ ಲಾಠಿ ಪ್ರಹಾರ ಮಾಡಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರವು ಮುಂದಿನ ಕ್ಯಾಬಿನೆಟ್ ಮೀಟಿಂಗದಲ್ಲಿ ಸದಾಶಿವ ವರದಿಯನ್ನು ಅಂಗೀರಿಸುವುದು, ದೌರ್ಜನ್ಯವೆಸಗಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸುವುದು, ಲಾಠಿಪ್ರಹಾರದಿಂದ ಗಾಯಗೊಂಡ 178ಜನ ಅಮಾಯಕರಿಗೆ ಪರಿಹಾರ ನೀಡುವುದು, ಉದ್ದೇಶಪೂರ್ವಕವಾಗಿ ವಿವಿಧ 78 ವಾಹನಗಳನ್ನು ಜಖಂಗೊಳಿಸಿದ ಪೊಲೀಸರ ವೇತನದಲ್ಲಿಯೇ ನಷ್ಟವನ್ನು ಭರ್ತಿ ಮಾಡಿಕೊಳ್ಳುವುದು, ಗಾಯಗೊಂಡ ದಲಿತ ಹಾಗೂ ಮಾದಿಗ ದಂಡೋರ ಸಮಿತಿಯ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆವತಿಯಿಂದ ಆರ್ಥಿಕ ನೆರವು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಹೋರಾಟ ಸಮಿತಿಯ ಮುಖಂಡರಾದ ಶಿವಾನಂದ ಬಣಕಾರ, ವಸಂತ ಭಾವಿಮನಿ, ಈರಪ್ಪ ಬಣಕಾರ, ರುದ್ರಪ್ಪ ನಡೂಲಮನಿ, ಯಲ್ಲಪ್ಪ ಬ್ಯಾಡ್ರಳ್ಳಿ, ಹನಮಂತ ಜೂಲಕಟ್ಟಿ, ಪುಟ್ಟರಾಜ ಪೂಜಾರ, ಭೀಮಣ್ಣ ಹವಳೆ, ಶಂಕರ ಭಾವಿಮನಿ, ಯಮನೂರಪ್ಪ ಮ್ಯಾಗಳಮನಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.