ಓಂ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾವಾಗಿರುವ ‘9 ಟು12’ ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಅಶೋಕ್ಪಾಟೀಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಕುತೂಹಲಕಾರಿ ಕಥೆಯನ್ನೊಳಗೊಂಡಿದೆ. ಕಿಶೋರ್ ಈ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಕಾಣಿಸಿಕೊಂಡಿದ್ದಾರೆ. ಸ್ಮಿತಾ, ಬಿ.ವಿ.ರಾಧಾ, ಎಂ.ಎಸ್.ಉಮೇಶ್, ಅರವಿಂದ್, ಸಿಹಿಕಹಿ ಚಂದ್ರು, ಬ್ಯಾಂಕ್ಜನಾರ್ದನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರಂಜನ್ ಬಾಬು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್ ಅವರ ಸಂಗೀತವಿದೆ. ಶಿವಕುಮಾರ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್ ಗೀತರಚನೆ ಚಿತ್ರಕ್ಕಿದೆ.
‘ಭದ್ರ’ನಿಗೆ ಮಾತು
ಎಂ.ಎನ್.ಕುಮಾರ್ ನಿರ್ಮಿಸುತ್ತಿರುವ ‘ಭದ್ರ’ ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ. ಮಹೇಶ್ರಾವ್ ನಿರ್ದೇಶನದ ಈ ಚಿತ್ರಕ್ಕೆ ಬಹುತೇಕ ಚಿತ್ರೀಕರಣ ನಡೆದಿದೆ. ‘ಭದ್ರ’ನ ಎರಡು ಗೀತೆಗಳು ಬ್ಯಾಂಕಾಕ್ನಲ್ಲಿ ಚಿತ್ರೀಕರಣಗೊಂಡಿದೆ. ಪ್ರಜ್ವಲ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಡೈಸಿ ಷಾ. ಸತ್ಯಜಿತ್, ಶರಣ್, ಬುಲೆಟ್ ಪ್ರಕಾಶ್, ಕಾಶಿ, ಗಿರೀಶ್, ಸಂಪತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ರಿಗುರು ಸಂಗೀತ, ಜೈಆನಂದ್ ಛಾಯಾಗ್ರಹಣ, ಶ್ರಿಕಾಂತ್ ತೆಂಗಿನತೋಟ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಉಮೇಶ್ಕುಮಾರ್ ನಿರ್ಮಾಣ ನಿರ್ವಹಣೆ, ಶಂಕರ್ ಬಿಲ್ಲೆಮನೆ ಸಂಭಾಷಣೆ ಬರೆದಿದ್ದಾರೆ.
ವಿಶ್ವಕಪ್ಗೆ ರಿಕ್ಕಿಕೇಜ್ ಸಂಗೀತ
‘ಬಾ ಮಳೆಯೇ ಬಾ..’ (ರಮೇಶ್ ಅರವಿಂದ್ ‘ಆಕ್ಸಿಡೆಂಟ್’ ಸಿನಿಮಾ) ಎಂಬ ಮಧುರ ಹಾಡಿಗೆ ರಾಗ ಸಂಯೋಜಸಿದ್ದ ಸಂಗೀತ ನಿರ್ದೇಶಕ ರಿಕ್ಕಿಕೇಜ್ ಫೆಬ್ರುವರಿ 17 ರಿಂದ ಪ್ರಾರಂಭವಾಗುತ್ತಿರುವ ಐ.ಸಿ.ಸಿ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭದದಲ್ಲಿ ತಾವು ಸಂಗೀತ ಸಂಯೋಜನೆ ಹಾಡನ್ನು ಪ್ರಸ್ತುತ ಪಡಿಸಲಿದ್ದಾರೆ. ಢಾಕಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಿಕ್ಕಿಕೇಜ್ ಕರ್ನಾಟಕದಿಂದ 30 ಜನ ಸಂಗೀತಗಾರರನ್ನು ಜೊತೆಗೂಡಿಸಿಕೊಂಡು ಸಂಗೀತ ಸಂಯೋಜನೆ ಮಾಡಿರುವ ಸಂಗೀತದ ಅಲೆ ಕ್ರೀಡಾ ಪ್ರೇಮಿಗಳನ್ನು ರಂಜಿಸಲಿದೆ ಎಂಬ ವಿಶ್ವಾಸ ಅವರಿಗಿದೆ. ಎರಡು ವಾರ ಈ ಸಂಗೀತ ಸಂಯೋಜನೆ ಮಾಡಿರುವ ರಿಕ್ಕಿಕೇಜ್ ‘ಆಕ್ಸಿಡೆಂಟ್’, ‘ವೆಂಕಟ ಇನ್ ಸಂಕಟ’ ಹಾಗೂ ‘ಕ್ರೇಜಿ ಕುಟುಂಬ’ ಚಿತ್ರಗಳಿಗೆ ಸಂಗೀತ ನೀಡಿದ್ದವರು.
ಕಸಿ ಹಾಡುಗಳು
‘ಸ್ವಯಂ ಕೃಷಿ’ ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕ ವೀರೇಂದ್ರ ಅವರ ಮುಖದಲ್ಲಿ ಸಂತಸ ನಗೆ. ತಮ್ಮ ಚಿತ್ರದ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರನ್ನು ಬಿಗಿದಪ್ಪಿ ಅವರು ಆನಂದ ಹಂಚಿಕೊಂಡರು. ಹಾಡುಗಳ ಬಗ್ಗೆ ಅಪಾಯ ಅಭಿಮಾನ ವ್ಯಕ್ತಪಡಿಸಿದ ವೀರೇಂದ್ರ ಚಿತ್ರೀಕರಣ ಮುಗಿಸಿದ ಸಂಭ್ರಮದಲ್ಲಿದ್ದರು.
ಹಾಡುಗಳು ಚೆನ್ನಾಗಿದ್ದರೆ ಪ್ರೇಕ್ಷಕರು ತಾವಾಗಿಯೇ ಸಿನಿಮಾ ಥಿಯೇಟರ್ಗೆ ಬರುತ್ತಾರೆ ಎಂಬುದು ‘ಸ್ವಯಂಕೃಷಿ’ ಚಿತ್ರತಂಡದ ಉವಾಚ.
‘ಸ್ವಯಂಕೃಷಿ ಚಿತ್ರದ ಎಲ್ಲಾ ಐದು ಹಾಡುಗಳು ಚೆನ್ನಾಗಿ ಬಂದಿವೆ. ಮೆಲೋಡಿ, ಪೆಪ್ಪಿ, ಐಟಂ ಎಲ್ಲಾ ಶೈಲಿಗಳ ಮಿಶ್ರಣ ಇಲ್ಲಿದೆ’ ಎಂದು ಮಾತು ಆರಂಭಿಸಿದ ಅಭಿಮನ್, ‘ನಾ ಬರೆದೆ..’ ಹಾಡು ಕಿರಣ್ ಸಾಗರ್ ಮತ್ತು ಅನನ್ಯ ಭಗತ್ ಅವರ ಕಂಠದಿಂದ ಸೊಗಸಾಗಿ ಹೊರಬಂದಿದೆ. ಗೌಸ್ ಪೀರ್ ಅದಕ್ಕೆ ಸಾಹಿತ್ಯ ಬರೆದಿದ್ದಾರೆ.
‘ಯಾರೋ.. ಯಾರೋ..’ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದು, ವಿ.ನಾಗೇಂದ್ರ ಪ್ರಸಾದ್ ಬರೆದಿರುವ ‘ಶುರುವಾಗಿದೆ..’ ಹಾಡುಗಳು ಜನರಿಗೆ ಇಷ್ಟವಾಗುತ್ತದೆ.
ಇನ್ನು ‘ನಾನೇ ಕಾಂಚನ ಮಾಲಾ..’ ಹಾಡನ್ನು ಚೈತ್ರಾ ಹಾಡಿದ್ದಾರೆ. ಮುಮೈತ್ ಖಾನ್ ಡಾನ್ಸ್ ಅವರ ಗಾಯನಕ್ಕೆ ಸಖತ್ ಸಾಥ್ ನೀಡಿದೆ ಎಂದು ಮೆಚ್ಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.