ರೋಹ್ತಕ್ (ಪಿಟಿಐ): ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಸದ್ಯದಲ್ಲೇ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಕಾರ್ಯಕ್ರಮವೊಂದನ್ನು ಜಾರಿಗೆ ತರಲಿದೆ ಕ್ರೀಡಾ ಸಚಿವ ಅಜಯ್ ಮಾಕನ್ ಹೇಳಿದ್ದಾರೆ.
ರಾಷ್ಟ್ರೀಯ ದೈಹಿಕ ಕ್ಷಮತೆ ಕಾರ್ಯಕ್ರಮ (ಎನ್ಪಿಎಫ್ಪಿ) ಹೆಸರಿನ ಈ ಕಾರ್ಯಕ್ರಮಕ್ಕೆ ಯೋಜನಾ ಆಯೋಗದ ಅನುಮತಿ ಈಗಾಗಲೇ ದೊರೆತಿದೆ. 12ನೇ ಪಂಚವಾರ್ಷಿಕ ಯೋಜನೆಯಡಿ ಎನ್ಪಿಎಫ್ಪಿ ಜಾರಿಗೆ ಬರಲಿದೆ ಎಂದು ಮಾಕನ್ ತಿಳಿಸಿದ್ದಾರೆ.
ಪ್ರಸಕ್ತ ಹರಿಯಾಣ ಸರ್ಕಾರ ಜಾರಿಗೆ ತಂದಿರುವ ಕ್ರೀಡಾ ಮತ್ತು ದೇಹದಾರ್ಢ್ಯತಾ ಪರೀಕ್ಷೆ (ಎಸ್ಪಿಎಟಿ) ಮಾದರಿಯಲ್ಲೇ ಈ ಯೋಜನೆ ಜಾರಿಯಾಗಲಿದೆ. ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಿರ್ಮಿಸಲಾದ ಕ್ರೀಡಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು.
ಹರಿಯಾಣ ಸರ್ಕಾರದ ಕ್ರೀಡಾ ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಕನ್, ಕ್ರೀಡೆಯ ಬೆಳವಣಿಗೆಗೆ ರಾಜ್ಯ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದೆ ಎಂದರು. `ಎಲ್ಲ ರಾಜ್ಯಗಳು ಹರಿಯಾಣದ ಮಾದರಿಯನ್ನು ಅನುಸರಿಸಿದರೆ, ಭಾರತ ಒಲಿಂಪಿಕ್ಸ್ನಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳಬಹುದು. ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಲಭಿಸಿದ ಆರು ಪದಕಗಳಲ್ಲಿ ನಾಲ್ಕು ಪದಕಗಳು ಹರಿಯಾಣದ ಅಥ್ಲೀಟ್ಗಳು ತಂದಿತ್ತಿದ್ದಾರೆ~ ಎಂದರು.