ಮಹದೇವಪುರ: `ರಾಷ್ಟ್ರದಲ್ಲಿ ಯಾವುದೇ ಬದಲಾವಣೆಯನ್ನು ತರುವಂತಹ ಶಕ್ತಿ ಯುವ ಜನತೆಗೆ ಇದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಸತ್ಯ. ದೇಶದ ಸುವ್ಯವಸ್ಥೆಯಲ್ಲಿ ಸಾಗಬೇಕೆಂದರೆ ಯುವ ಪೀಳಿಗೆ ಸನ್ಮಾರ್ಗದಲ್ಲಿ ಮುನ್ನಡೆಯಬೇಕು~ ಎಂದು ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನೋತ್ಸವದ ಅಂಗವಾಗಿ ಕ್ಷೇತ್ರದ ಗರುಡಾಚಾರ್ಯಪಾಳ್ಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ದುಶ್ಚಟಗಳಿಂದ ದೇಹಕ್ಕಾಗಲಿ, ವೈಯಕ್ತಿಕ ಬೆಳವಣಿಗೆಯಾಗಲಿ ಯಾವುದೇ ಲಾಭ ಆಗುವುದಿಲ್ಲ ಎಂಬುದನ್ನು ಯುವಕ, ಯುವತಿಯರು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ, ದೊಡ್ಡನೆಕ್ಕುಂದಿ ವಾರ್ಡ್ ಬಿಬಿಎಂಪಿ ಸದಸ್ಯ ಎನ್.ಆರ್.ಶ್ರೀಧರ್ ರೆಡ್ಡಿ, ಕ್ಷೇತ್ರದ ಮೋರ್ಚಾ ಘಟಕದ ಅಧ್ಯಕ್ಷ ಹೂಡಿ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಎನ್.ರವಿಶಂಕರ್, ಸಿ.ಜೆ.ಲೋಕೇಶ ಕುಮಾರ್, ಹಗದೂರು ವಾರ್ಡ್ ಅಧ್ಯಕ್ಷ ಜೆ.ರಘು ಹಾಗೂ ಪದಾದಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಗರುಡಾಚಾರ್ಯಪಾಳ್ಯದಲ್ಲಿನ ಮಂಜುನಾಥಸ್ವಾಮಿ ದೇವಾಲಯದ ಮುಂದೆ ಏರ್ಪಡಿಸಿದ್ದ ಜಾನಪದ ಕಲಾಮೇಳಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ನಂದಿ ಧ್ವಜ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.