ಮಾಲೂರು: ತಾಲ್ಲೂಕು ಆಡಳಿತವು ಶುಕ್ರವಾರ ನಿಗದಿಪಡಿಸಿದ್ದ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ಪ್ರಕರಣಗಳ ಸಭೆಯನ್ನು ತಹಶೀಲ್ದಾರ್ ಡಾ.ಸುಧಾ ಕಾರಣವಿಲ್ಲದೇ ಸಭೆ ಮುಂದೂಡಿದ್ದಾರೆ ಎಂದು ಆರೋಪಿಸಿ ದಲಿತ ಪರ ಸಂಘಟನೆಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲ್ಲೂಕು ಆಡಳಿತವು ಜನಪ್ರತಿನಿಧಿಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ದಲಿತ ಐಕ್ಯತ ವೇದಿಕೆಯ ಮುಖಂಡ ಮಣಿಶೆಟ್ಟಹಳ್ಳಿ ಆಂಜಿ ಆರೋಪಿಸಿದರು. ತಹಶೀಲ್ದಾರ್ ಪ್ರತಿಭಟನಾಕಾರರನ್ನು ಮನವೊಲಿಸಿ, ತುರ್ತು ಕೆಲಸದ ನಿಮಿತ್ತ ಸ್ಥಳೀಯ ಶಾಸಕರು ಸಭೆಗೆ ಬಾರದೇ ಇರುವುದರಿಂದ ಸಭೆಯನ್ನು ಡಿ.20ಕ್ಕೆ ಮುಂದೂಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಹೇಳಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ದಲಿತ ಐಕ್ಯತ ವೇದಿಕೆ ಪುರಸನಹಳ್ಳಿ ಶ್ರೀನಿವಾಸ್, ಕೋಡೂರು ಗೋಪಾಲ್, ರವಿ, ಸಮತಾ ಸೈನಿಕ ದಳದ ತಾಲ್ಲೂಕು ಅಧ್ಯಕ್ಷ ಗೋವಿಂದಸ್ವಾಮಿ ತಿಪ್ಪಸಂದ್ರ ಶ್ರೀನಿವಾಸ್, ಪಿ.ವೆಂಕಟೇಶ್, ಅರಳೇರಿ ಗೋವಿಂದಪ್ಪ, ತಿಮ್ಮರಾಯಪ್ಪ, ಮುನಿಕೃಷ್ಣಪ್ಪ, ಚಂದ್ರು, ಕಡತೂರು ಕೃಷ್ಣಪ್ಪ, ಸಿದ್ದನಹಳ್ಳಿ ನಾಗರಾಜ್, ಮಾಸ್ತಿ ಮಂಜು, ನಾರಾಯಣಸ್ವಾಮಿ ಪ್ರಕಾಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.