ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಯಲ್ಲಿ ಪ್ರತಿಧ್ವನಿಸಿದ ನೀರಿನ ಸಮಸ್ಯೆ

ಇನ್ನೂ ದುರಸ್ತಿ ಕಾಣದ ಶಾಲೆಗಳ ನೀರಿನ ಫಿಲ್ಟರ್
Last Updated 12 ಡಿಸೆಂಬರ್ 2012, 7:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ನೀರಿಗಾಗಿ ಜನರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಜಿ.ಪಂ. ಸದಸ್ಯರು ಸಹ ದೂರು ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಗಮನ ನೀಡಬೇಕು.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲು ಸರ್ಕಾರ ನೀಡಿರುವ ಹಣವನ್ನು ಪೂರ್ತಿಯಾಗಿ ಖರ್ಚು ಮಾಡಿ.ಅಗತ್ಯ ಬಿದ್ದರೆ ಸರ್ಕಾರದಿಂದ ಮತ್ತೆ ತರಿಸಿಕೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಕೆ.ಎಂ. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಅಧ್ಯಕ್ಷೆ ಗೀತಾ ಬಸವರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಜನತೆ ನೀರಿಗಾಗಿ ಅಲೆಯುತ್ತಿದ್ದಾರೆ. ಸರ್ಕಾರ ನೀಡಿರುವ ಹಣವನ್ನು ಪೂರ್ತಿಯಾಗಿ ವೆಚ್ಚ ಮಾಡಿ ನೀರಿನ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.

ಹೊಳಲ್ಕೆರೆ ತಾಲ್ಲೂಕಿನ ರಾಮನೇಹಳ್ಳಿಯಲ್ಲಿ ಕುಡಿಯುವ ನೀರಿಲ್ಲ ಎಂದು ಜನತೆ ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ. ಪ್ರತಿ ದಿನ ಪತ್ರಿಕೆ ಓದಿ. ಆಗ ಸಮಸ್ಯೆಗಳು ಗೊತ್ತಾಗುತ್ತವೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ಕೂಡಲೇ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಬಗ್ಗೆ ತಾತ್ಸಾರ ಭಾವನೆ ತೋರಬಾರದು ಎಂದು ಜಿ.ಪಂ. ಉಪಾಧ್ಯಕ್ಷ ದ್ಯಾಮಣ್ಣ ತಿಳಿಸಿದರು.
3 ತಿಂಗಳಿಂದ ಅಧಿಕಾರಿಗಳು ಕೇವಲ ಸಬೂಬು ಹೇಳುತ್ತಿದ್ದಾರೆ. ನಾವುಗಳು ಕ್ಷೇತ್ರಗಳಿಗೆ ಹೋಗುವಂತಿಲ್ಲ. ಮತ ನೀಡಿದ ಜನತೆ ನಮ್ಮನ್ನು ಹಿಡಿದು ನಿಲ್ಲಿಸಿ ನೀರು ಕೊಡಿ ಎಂದು ಕೇಳುತ್ತಿದ್ದಾರೆ. ಸಬೂಬು ಹೇಳುವುದನ್ನು ನಿಲ್ಲಿಸಿ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ಅಧ್ಯಕ್ಷೆ ಗೀತಾ ಕೂಡ ಮಧ್ಯ ಪ್ರವೇಶ ಮಾಡಿ ಅಧಿಕಾರಿಗಳು ಕುಡಿಯುವ ನೀರಿನ ವಿಚಾರದಲ್ಲಿ ಉದಾಸೀನ ತೋರಬಾರದು ಎಂದು ಎಚ್ಚರಿಸಿದರು.

ನೀರಿನ ಫಿಲ್ಟರ್ ಬಗ್ಗೆ ಮಾತನಾಡಿದ ಸಿಇಒ, ಸರ್ಕಾರಿ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎನ್ನುವ ಉದ್ದೇಶದಿಂದ `ವಾಟರ್ ಫಿಲ್ಟರ್'ಗಳನ್ನು ಅಳವಡಿಸಲಾಗಿದೆ. ಆದರೆ, ಫಿಲ್ಟರ್‌ಗಳು ದುಸ್ಥಿತಿಯಲ್ಲಿವೆ ಎನ್ನುವ ದೂರುಗಳಿವೆ. ತಕ್ಷಣ ಅಂತಹ ಶಾಲೆಗಳಿಗೆ ಭೇಟಿ ನೀಡಿ ದುರಸ್ತಿಗೆ ಬಂದಿರುವ `ವಾಟರ್ ಫಿಲ್ಟರ್'ಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಮಂಜುನಾಥ್, ಜಿಲ್ಲೆಯಲ್ಲಿ 511 ಶಾಲೆಗಳಿಗೆ ವಾಟರ್ ಫಿಲ್ಟರ್ ಅಳವಡಿಸಲಾಗಿದೆ. ಇವುಗಳಲ್ಲಿ 362 ಶಾಲೆಗಳಲ್ಲಿನ ವಾಟರ್ ಫಿಲ್ಟರ್‌ಗಳು ಕ್ರಮಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದ 149 ಶಾಲೆಗಳಲ್ಲಿ ವಾಟರ್ ಫಿಲ್ಟರ್‌ಗಳು ದುರಸ್ತಿಯಲ್ಲಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 34, ಹಿರಿಯೂರು ತಾಲ್ಲೂಕಿನಲ್ಲಿ 77, ಚಳ್ಳಕೆರೆಯಲ್ಲಿ 18, ಮೊಳಕಾಲ್ಮುರು ತಾಲ್ಲೂಕಿನಲ್ಲಿ 20 ಶಾಲೆಗಳಲ್ಲಿ ವಾಟರ್ ಫಿಲ್ಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿವರಿಸಿದರು.

ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಿ: ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗದಿತ ಅವಧಿ ಒಳಗೆ ಪ್ರಗತಿ ಸಾಧನೆ ಮಾಡಬೇಕು. ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನಿಗಾ ವಹಿಸಬೇಕು ಎಂದು ಸಿಇಒ ಕೆ.ಎಂ. ನಾರಾಯಣಸ್ವಾಮಿ ಸೂಚಿಸಿದರು.

ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮಗಳಿಗೆ ನೀಡಿರುವ ಕಾಮಗಾರಿ ಕಟ್ಟಡಗಳ ನಿರ್ಮಾಣವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಅಪೂರ್ಣ ಕಾಮಗಾರಿಗಳನ್ನು ಫೆಬ್ರುವರಿ ಅಂತ್ಯದ ಒಳಗೆ ಪೂರ್ಣಗೊಳಿಸಿ ಕಟ್ಟಡಗಳನ್ನು ಇಲಾಖೆ ವಶಕ್ಕೆ ನೀಡುವಂತೆ ಸಿಇಒ ಸೂಚಿಸಿದರು.

ವಿಶೇಷ ಘಟಕ ಯೋಜನೆ ಅಡಿ ಪರಿಶಿಷ್ಟಜಾತಿ ಫಲಾನುಭವಿಗಳಿಗೆ ಸಹಾಯ ಸೌಲತ್ತುಗಳನ್ನು ವಿವಿಧ ಇಲಾಖೆಗಳ ಮೂಲಕ ಒದಗಿಸಲ್ಙು 1.30 ಕೋಟಿ ಒದಗಿಸಲಾಗಿದೆ. ಆದರೆ, ಕೆಲವು ಇಲಾಖೆಗಳು ನಿಗದಿತ ಗುರಿ ಸಾಧನೆ ಮಾಡದಿರುವ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ ಅವರು, ತ್ವರಿತವಾಗಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಔಷಧಿ ಕೊರತೆ
ಜಿಲ್ಲೆಯ ಕೆಲವು ಕಡೆ ಆಸ್ಪತ್ರೆಗಳಲ್ಲಿ ಔಷಧಿ, ಬ್ಯಾಂಡೇಜ್ ಇತ್ಯಾದಿ ಅಗತ್ಯ ಸಾಮಗ್ರಿಗಳು ಲಭ್ಯವಿಲ್ಲದೇ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿರುವ ಬಗ್ಗೆ ಉಪಾಧ್ಯಕ್ಷ ದ್ಯಾಮಣ್ಣ ಪ್ರಸ್ತಾಪಿಸಿದರು.ಅಗತ್ಯ ಔಷಧಿ ಸಾಮಗ್ರಿಗಳು ಲಭ್ಯ ಇರುವಂತೆ ಅಗತ್ಯ ಕ್ರಮವಹಿಸುವುದಾಗಿ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನ ನವಂಬರ್ ಅಂತ್ಯದವರೆಗೆ 19,424 ಮಕ್ಕಳಿಗೆ ಪೋಲಿಯೋ, ಡಿಪಿಟಿ ಲಸಿಕೆ ನೀಡಲಾಗಿದೆ 19,380 ಮಕ್ಕಳಿಗೆ ಬಿಸಿಸಿ, 19,522 ಮಕ್ಕಳಿಗೆ ದಢಾರ ವಿರುದ್ಧ ಚುಚ್ಚುಮದ್ದು ನೀಡಲಾಗಿದೆ. ಅಂಧತ್ವ ನಿವಾರಣಾ ಕಾರ್ಯಕ್ರಮದಡಿ 6896 ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ 10,070 ಕಫ ಪರೀಕ್ಷೆ ಮಾಡಲಾಗಿದ್ದು, 1253 ಹೊಸರೋಗಿಗಳನ್ನು ಗುರುತಿಸಲಾಗಿದೆ. ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಅಡಿ 33952 ರಕ್ತಲೇಪನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 41 ಮಲೇರಿಯಾ ಪ್ರಕರಣಗಳು ಖಚಿತಗೊಂಡಿವೆ ಎಂದು ಆರೋಗ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 3ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆ ಅಡಿ 24 ಗ್ರಾಮಗಳು ಮಂಜೂರಾಗಿದ್ದು, ಈ ಪೈಕಿ 18 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣವಾಗಿದೆ. ಉಳಿದ 6 ಗ್ರಾಮಗಳಲಿ ಬಾಕಿ ಉಳಿದಿವೆ ಎಂದು ಜಿ.ಪಂ. ಎಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸಭೆಗೆ ತಿಳಿಸಿದರು.

ಜಲಾನಯನ ಅಭಿವೃದ್ದಿಯ ವಿವಿಧ ಯೋಜನೆಗಳ ಅಡಿ ಪ್ರಸಕ್ತ ಸಾಲಿನಲ್ಙ್  31.57 ಕೋಟಿ  ಅನುದಾನ ನಿಗದಿಯಾಗಿದೆ. ನವಂಬರ್‌ವರೆಗೆ ಒಟ್ಟುರೂ9.28 ಕೋಟಿ ವೆಚ್ಚ ಮಾಡಲಾಗಿದೆ ಎಂದು  ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ರಾಮದಾಸ್ ವಿವರಿಸಿದರು.

ಉದ್ಯೋಗ ಖಾತ್ರಿ
ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಙ್ 86.99 ಕೋಟಿ  ಬಿಡುಗಡೆಯಾಗಿದ್ದು, ಇದರಲ್ಲಿ ್ಙ  72.48 ಕೋಟಿ ವೆಚ್ಚವಾಗಿದೆ. 6988 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಸಭೆಗೆ ತಿಳಿಸಿದರು.ಸಭೆಯಲ್ಲಿ ಕೆಡಿಪಿ ಸಮಿತಿ ಸದಸ್ಯರಾದ ಪಾರ್ಥಸಾರಥಿ, ಮುಖ್ಯ ಯೋಜನಾಧಿಕಾರಿ ಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT