ಚೆನ್ನೈ: ಇಲ್ಲಿನ ಭಗವಾನ್ ಮಹಾವೀರ್ ಪ್ರತಿಷ್ಠಾನ ನೀಡುತ್ತಿರುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಭುವನೇಶ್ವರದ `ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್~ನ ಸಂಸ್ಥಾಪಕ ಡಾ. ಅಚ್ಯುತ್ ಸಮಂತ್ಗೆ ಬುಧವಾರ ಪ್ರದಾನ ಮಾಡಲಾಯಿತು.
ಚಿನ್ಮಯ ಹೆರಿಟೇಜ್ ಕೇಂದ್ರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರು ಸಮಂತ್ಗೆ 15ನೇ ಭಗವಾನ್ ಮಹಾವೀರ್ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಪ್ರಶಸ್ತಿ 10 ಲಕ್ಷ ರೂಪಾಯಿ ನಗದು, ಬಿನ್ನವತ್ತಳೆ ಹಾಗೂ ಸ್ಮರಣ ಫಲಕ ಒಳಗೊಂಡಿದೆ.
ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ಅವರ ನೇತೃತ್ವದ ಆಯ್ಕೆ ಸಮಿತಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ 260 ಜನರ ಹೆಸರುಗಳನ್ನು ಪರಿಶೀಲಿಸಿ ಡಾ. ಅಚ್ಯುತ್ ಸಮಂತ್ ಅವರನ್ನು ಆಯ್ಕೆ ಮಾಡಿತ್ತು.
ಈ ಹಿಂದೆ ಆಂಗ್ ಸಾನ್ ಸೂಕಿ, ಅಣ್ಣಾ ಹಜಾರೆ, ಡಾ. ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ ಅವರಂತಹ ಗಣ್ಯರಿಗೆ ಈ ಪ್ರಶಸ್ತಿ ನೀಡಲಾಗಿತ್ತು.
ಹಿನ್ನೆಲೆ: ಡಾ. ಅಚ್ಯುತ್ ಸಮಂತ್ 1993ರಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಒಡಿಶಾದ ಭುವನೇಶ್ವರದಲ್ಲಿ ಆದಿವಾಸಿ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ `ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೊಷಿಯಲ್ ಸೈನ್ಸ್~ ಸ್ಥಾಪಿಸಿದರು. ಕೇವಲ 125 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ ಈಗ ಬೃಹದಾಕಾರವಾಗಿ ಬೆಳೆದಿದೆ.
16,500ಕ್ಕೂ ಹೆಚ್ಚು ಬಡ ಆದಿವಾಸಿ ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದ ಜತೆ ಉಚಿತ ವಸತಿ, ಊಟ, ವಸ್ತ್ರ, ಆರೋಗ್ಯ, ಅಧ್ಯಯನ ಸಾಮಗ್ರಿ, ವೃತ್ತಿಶಿಕ್ಷಣ ತರಬೇತಿ, ಕಂಪ್ಯೂಟರ್ ಶಿಕ್ಷಣ ಹೀಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ.