ಬ್ರಹ್ಮಾವರ: ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾಡೂರು ಮಹಾಗಣಪತಿ ರೈತ ಶಕ್ತಿ ಗುಂಪು, ಮಹಾಗಣಪತಿ ರೈತ ಸೇವಾ ಕೂಟದ ಆಶ್ರಯದಲ್ಲಿ ಕಾಡೂರು ಗ್ರಾಮದ ಮುಂಡಾಡಿಯಲ್ಲಿ ತೆಂಗು ಮತ್ತು ಅಡಿಕೆ ಬೆಳೆಯಲ್ಲಿ ಸಗ್ರ ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸದಾಶಿವ ಅಧಿಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತೆಂಗು ಮತ್ತು ಅಡಿಕೆ ಬೆಳೆ ಕರಾವಳಿ ಪ್ರದೇಶದ ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯೇ ಕಡಿಮೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿ ತಜ್ಞರಿಂದ ಮಾಹಿತಿ ಪಡೆದು ಕೃಷಿಯತ್ತ ಆಸಕ್ತಿ ಹುಟ್ಟಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕೆ.ವಿ.ಕೆಯ ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮಿ ಎನ್. ಹೆಗಡೆ ತೆಂಗು ಮತ್ತು ಅಡಿಕೆ ಬೆಳೆಯನ್ನು ಬಾಧಿಸುವ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು, ತೋಟಗಾರಿಕಾ ವಿಭಾಗದ ಎಚ್.ಎಸ್.ಚೈತನ್ಯ ಅವರು ತೆಂಗು ಮತ್ತು ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಪ್ರದೀಪ್ ಹೆಬ್ಬಾರ್ ಮತ್ತು ಸಿಬ್ಬಂದಿ ಕಿಸಾನ್ ಆಗ್ರೊಟೆಕ್ ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಪರಿವಾರದ ಎಸ್.ಎಂ.ರಾವ್, ಬೇಸಾಯಶಾಸ್ತ್ರದ ವಿಜ್ಞಾನಿ ಪವಿತ್ರ ಎ.ಎಚ್, ವಿಜಯ ಬ್ಯಾಂಕ್ನ ಉಪ ವ್ಯವಸ್ಥಾಪಕ ಕೃಷ್ಣಯ್ಯ ಶೆಟ್ಟಿ, ಕಾಡೂರು ಮಹಾಗಣಪತಿ ರೈತಕೂಟದ ಅಧ್ಯಕ್ಷ ಬೋಜನಾಯಕ, ಶಂಭು ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾಗಣಪತಿ ರೈತಶಕ್ತಿ ಗುಂಪಿನ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ ಸ್ವಾಗತಿಸಿದರು.