ಹರಿಹರ: ಜಗತ್ತಿನ ಸೃಷ್ಟಿ, ಸ್ಥಿತಿ, ಲಯ ಕರ್ತರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಲ್ಲರೂ ದೇವಿಯ ಅಂಶವಾಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಲು ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿ ಕಾವ್ಯ ರಚಿಸಿದ್ದಾರೆ ಎಂದು ನಾಗಮಣಿ ಶಾಸ್ತ್ರಿ ಅಭಿಪ್ರಾಯಪಟ್ಟರು.
ನಗರದ ನಡುವಲ ಪೇಟೆ ವಿಠಲ ಮಂದಿರದಲ್ಲಿ ದಸರಾ ಮಹೋತ್ಸವ ಸಮಿತಿ ವತಿಯಿಂದ ಶುಕ್ರವಾರ ನಡೆದ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಸೌಂದರ್ಯ ಲಹರಿ ಕುರಿತು ಅವರು ಮಾತನಾಡಿದರು.
100 ಶ್ಲೋಕಗಳನ್ನು ಹೊಂದಿರುವ ಸೌಂದರ್ಯ ಲಹರಿ, ಕಾವ್ಯ ಮತ್ತು ಅಧ್ಯಾತ್ಮ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಪುರುಷಾರ್ಥ ಮತ್ತು ಪರಮಾರ್ಥ ಎರಡರ ಬಗ್ಗೆ ಸಮನ್ವಯ ನೀಡುತ್ತದೆ.
ದೇವಿಯ ಆರಾಧನೆಗೆ ಬೇಕಾದ ತಂತ್ರ ಮತ್ತು ಮಂತ್ರ ಎರಡೂ ಇದೆ. ತಾಯಿ, ಜಗನ್ಮಾತೆ ಹಾಗೂ ಸರ್ವಶಕ್ತೆ. ಆಕೆಯ ಆರಾಧನೆ ಜಗತ್ತಿನ ಸರ್ವಶಕ್ತಿಯ ಆರಾಧನೆಯಾಗಿದೆ. ನಿತ್ಯಪಾರಾಯಣ ಮಾಡುವುದರಿಂದ ಎಲ್ಲ ಅವಬಂಧನಗಳು ಕಳಚುತ್ತವೆ. ಲಿಂಗಭೇದವಿಲ್ಲದೇ ಪುರುಷ ಹಾಗೂ ಮಹಿಳೆಯರು ಸೌಂದರ್ಯ ಲಹರಿ ಪಠಣ ಮಾಡಬಹುದು. ಗುರುಮುಖೇನ ಕಲಿತು, ಪಠಣ ಮಾಡುವುದು ಉತ್ತಮ. ಉಚ್ಚಾರ ದೋಷದಿಂದ ಮೂಲಾರ್ಥ ಅನರ್ಥವಾಗುವ ಜತೆಗೆ ವ್ಯತಿರಿಕ್ತ ಅಥವಾ ವಿರುದ್ಧ ಪರಿಣಾಮ ಬೀರುತ್ತದೆ ಎಂದರು.
ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯನ್ನು ಸಾಮೂಹಿಕವಾಗಿ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ಕಷಾಯದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್, ಶಿವಪ್ರಕಾಶ್ ಶಾಸ್ತ್ರಿ ಉಪಸ್ಥಿತರಿದ್ದರು.