ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಗೇಜ್ ನಿರ್ವಹಣೆ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಬರಗಾಲ ಪರಿಸ್ಥಿತಿ ಪರಿಹಾರ ಕುರಿತ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಕುರಿತ ಚರ್ಚೆ ವೇಳೆ ಹೇಳಿದರು.
ಗೇಜ್ ನಿರ್ವಹಣೆ ಅಸಮರ್ಪಕವಾಗಿ ನಡೆಯುತ್ತಲೇ ಇದೆ. ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಮೇಲ್ಭಾಗದ ರೈತರು ಹೆಚ್ಚು ನೀರು ಪಡೆಯುತ್ತಿರುವುದೇ ಕಾರಣಎಂದು ಮಾನ್ವಿ ಶಾಸಕ ಹಂಪಯ್ಯ ನಾಯಕ ಒತ್ತಾಯಿಸಿದರು.
ಸದ್ಯ ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿದೆ. ರಾಯಚೂರು ನಗರಕ್ಕೆ ಇನ್ನೂ ಒಂದು ತಿಂಗಳು ನೀರು ಪೂರೈಸಲು ಬೇಕಾದ ನೀರು ಸಂಗ್ರಹಿಸಲಾಗಿದೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹರಿಸಲು ಸಮಸ್ಯೆ ಆಗುತ್ತಿದೆ ಎಂದು ಎಂಜಿನಿಯರ್ ಹನುಮಂತರಾಯ ವಿವರಣೆ ನೀಡಿದರು.
ಇದನ್ನು ಆಕ್ಷೇಪಿಸಿದ ಶಾಸಕ ಸಯ್ಯದ್ ಯಾಸಿನ್, ಕಾಲುವೆಯಿಂದ ರಾಯಚೂರಿಗೆ ನೀರು ಪೂರೈಸಲು ಹಾಗೂ ಕೊನೆ ಭಾಗದ ರೈತರಿಗೆ ತೊಂದರೆ ಆಗುತ್ತದೆ ಎಂಬ ಮಾತು ಸರಿಯಲ್ಲ. ಮೇಲ್ಭಾಗದಿಂದಲೇ ನೀರು ಹರಿಸುವಲ್ಲಿ ಅನ್ಯಾಯವಾಗುತ್ತಿದೆ. ರಾಜಕೀಯ ಹುನ್ನಾರವೂ ಇದರಲ್ಲಿದೆ. ನಿಮ್ಮದೇ ಲೋಪ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಮಸ್ಯೆ ಸರಿಪಡಿಸಬೇಕಾದರೆ ತುಂಗಭದ್ರಾ ಕಾಲುವೆ `0~ ಮೈಲ್ನಿಂದಲೇ ಆರಂಭಿಸಬೇಕು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ ಹೇಳಿದರು.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ನಾಡಗೌಡ ಹೇಳಿದರು.
ಶೀಘ್ರವೆ ಎರಡೂ ಜಿಲ್ಲೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಗೇಜ್ ನಿರ್ವಹಣೆ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಲಿ ಎಂದು ಸಚಿವರು ಚರ್ಚೆಯ ಬಳಿಕ ಹೇಳಿದರು.