ಬೆಂಗಳೂರು: ಪ್ರತಿ ತಿಂಗಳೂ ಸಮರ್ಪಕವಾಗಿ ವೇತನ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂಪ್ಯೂಟರ್ ಆಪರೇಟರ್ಸ್ ಒಕ್ಕೂಟದ ಸದಸ್ಯರು ಗುರುವಾರ ನಗರದ ಡೇರಿ ವೃತ್ತದ ಬಳಿಯ ಕಾರ್ಮಿಕರ ಭವನದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ, `ಕಂಪ್ಯೂಟರ್ ಆಪರೇಟರ್ಗಳಿಗೆ ಬಿಬಿಎಂಪಿ ಪ್ರತಿ ತಿಂಗಳೂ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಎರಡು ಮೂರು ತಿಂಗಳ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕಾರ್ಮಿಕ ಇಲಾಖೆಯ ಆಯುಕ್ತರು ಪಾಲಿಕೆಯ ಮೇಲೆ ಒತ್ತಡ ತರಬೇಕು' ಎಂದು ಆಗ್ರಹಿಸಿದರು.
`ಕಂಪ್ಯೂಟರ್ ಆಪರೇಟರ್ಗಳ ವೇತನದಿಂದ ಕಡಿತ ಮಾಡಿಕೊಳ್ಳುತ್ತಿರುವ ಭವಿಷ್ಯನಿಧಿ ಮತ್ತು ಆರೋಗ್ಯ ವಿಮೆಯ ಹಣದ ಮಾಹಿತಿಯನ್ನು ಪಾಲಿಕೆ ನೀಡುತ್ತಿಲ್ಲ. ಅಲ್ಲದೇ ಬಿಬಿಎಂಪಿಯು ಕಂಪ್ಯೂಟರ್ ಆಪರೇಟರ್ಗಳ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೇ ಮೊದಲ ಆದ್ಯತೆ ನೀಡಬೇಕು' ಎಂದು ಅವರು ಒತ್ತಾಯಿಸಿದರು.
ನಂತರ ಕಾರ್ಮಿಕ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.