ಕೊಪ್ಪಳ: ಪ್ರತಿಯೊಬ್ಬ ನಾಗರಿಕ ರಾಷ್ಟ್ರಕ್ಕಾಗಿ ಸಮರ್ಪಣಾ ಮನೋಭಾವ ಹೊಂದಿರಬೇಕು. ಈ ವಿಷಯದಲ್ಲಿ ಪೊಲೀಸ್ ಸಿಬ್ಬಂದಿ ಎಲ್ಲರಿಗೂ ಆದರ್ಶಪ್ರಾಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಹೇಳಿದರು.
ಅವರು ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಜರುಗಿದ ಪೊಲೀಸ್ ಹುತಾತ್ಮ ದಿನಾಚರಣೆ ಕಾಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕಾಗಿ, ದೇಶದ ಜನರ ಭದ್ರತೆಗಾಗಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಹೋರಾ ಡುತ್ತಾರೆ. ಅವರು ಎಚ್ಚರದಿಂದ ಇರುತ್ತಾರೆ.
ಹೀಗಾಗಿಯೇ ಜನರು ನಿರಾತಂಕವಾಗಿ ನಿದ್ದೆ ಮಾಡಲು ಸಾಧ್ಯ. ಇದು ಅವರ ಕರ್ತವ್ಯ ನಿಷ್ಠೆಯನ್ನು ತೋರುತ್ತದೆ ಎಂದೂ ಬಣ್ಣಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ದೇಶದಲ್ಲಿ 578 ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ನಂತರ ವಿವಿಧ ಗಣ್ಯರು ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಡಿಎಸ್ಪಿ ಸುರೇಶ ಮಸೂತಿ, ಗಂಗಾವತಿ ಡಿಎಸ್ಪಿ ಡಿ.ಎಲ್.ಹಣಗಿ, ಗ್ರಾಮೀಣ ಸಿಪಿಐ ವೆಂಕಟಪ್ಪ ನಾಯಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯರಾದ ಗವಿಸಿದ್ಧಪ್ಪ ಮುಂಡರಗಿ, ಇಂದಿರಾ ಭಾವಿಕಟ್ಟಿ, ಬಿಜೆಪಿ ಮುಖಂಡ ಸಂಗಪ್ಪ ವಕ್ಕಳದ, ಕಾಂಗ್ರೆಸ್ ಮುಖಂಡ ಶಾಂತಣ್ಣ ಮುದಗಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಉಪಸ್ಥಿತರಿದ್ದರು.