ಪಾವಗಡ: ಪ್ರಮುಖ ವಾಣಿಜ್ಯ ಕೇಂದ್ರ, ಕರ್ನಾಟಕ-ಆಂಧ್ರದ ಸಂಪರ್ಕ ನಗರ, ಜತೆಗೆ ಧಾರ್ಮಿಕ ತಾಣವಾಗಿಯೂ ಗುರುತಿಸಿಕೊಂಡಿರುವ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಇಲ್ಲದೆ ಇರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.
ಖಾಸಗಿ ಬಸ್ ನಿಲ್ದಾಣವನ್ನೇ 150ಕ್ಕೂ ಹೆಚ್ಚು ಸರ್ಕಾರಿ ಬಸ್ಗಳು ಅವಲಂಬಿಸಿರುವುದರಿಂದ ಸಮಸ್ಯೆ ಇಮ್ಮಡಿಗೊಂಡಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಡಿಯುವ ನೀರಿಗೂ ಪರದಾಡಬೇಕು. ಉತ್ತಮ ಹೋಟೆಲ್ ಇಲ್ಲ. ಇರುವ ಹೋಟೆಲ್ಗಳಲ್ಲಿ ಶುಚಿತ್ವ ಇಲ್ಲ. ಅಂಗಡಿ ಮಾಲೀಕರ ಕಿರಿಕಿರಿ ತಪ್ಪದು... ಸಮಸ್ಯೆಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ತಾಲ್ಲೂಕಿನ ಹಲವು ಗ್ರಾಮಗಳಿಗೆ ಆಂಧ್ರ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಆದರೆ ರಾಜ್ಯ ಸಾರಿಗೆ ಇತ್ತ ಗಮನಹರಿಸಿಲ್ಲ. ಸಾರಿಗೆ ವ್ಯವಸ್ಥೆಗಾಗಿ ಸಲ್ಲಿಸುವ ಮನವಿಗೆ ಸ್ಪಂದನೆ ಸಿಕ್ಕುತ್ತಿಲ್ಲ ಎಂದು ಕೆಲ ಗ್ರಾಮಗಳ ಗ್ರಾಮಸ್ಥರು ದೂರುತ್ತಾರೆ. ಇಲ್ಲಿನ ಬಸ್ಗಳ ಸ್ಥಿತಿ ಪ್ರಯಾಣಿಸಲು ಯೋಗ್ಯವಾಗಿಲ್ಲ ಎನ್ನುವ ದೂರುಗಳು ಇವೆ.