ವಿಜಯಪುರ: `ಮನೆ, ಮಂದಿ, ಮಕ್ಕಳು ಎಂಬ ಮನೋಭಾವನೆ ರೂಢಿಸಿಕೊಂಡು ಯಾಂತ್ರಿಕ ಜೀವನದಲ್ಲಿಯೇ ಮಹಿಳೆಯು ತನ್ನ ಜೀವನವನ್ನು ದೂಡುವ ಬದಲಿಗೆ, ಬಿಡುವಿನ ವೇಳೆಯನ್ನು ಸಮಾಜ ಸೇವೆಯಲ್ಲಿ ತೊಡಗಬೇಕು~ ಎಂದು ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಸುನಂದಬಸಪ್ಪ ಕರೆ ನೀಡಿದರು.
ಅವರು ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಿಳಾ ಸಂಘ, ವಿಜಯಪುರ ಘಟಕದ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
`ಮಹಿಳೆಯರಲ್ಲಿ ಮಾನವೀಯ ಸಂಬಂಧಗಳ ಉಳಿಸಿಕೊಳ್ಳಬೇಕೆನ್ನುವ ಒತ್ತಡವಿದ್ದರೂ ಸಮಾಜದ ಏಳಿಗೆಗೆ ದುಡಿಯಬಲ್ಲ ಸ್ಫೂರ್ತಿ ಇರಬೇಕು. ಯುವಪೀಳಿಗೆಯಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸಬೇಕಾದ ಅನಿವಾರ್ಯತೆ ಮಹಿಳೆಯ ಮೇಲಿದೆ~ ಎಂದು ಅವರು ತಿಳಿಸಿದರು.
`ನಾನು, ನನ್ನದೆಂಬ ಭಾವನೆಗಿಂತಲೂ ನಮ್ಮದೆಂಬ ಭಾವನೆಯು ವಿಶಾಲವಾದುದು. ಅದರಿಂದಲೇ ಆತ್ಮಸಂತೃಪ್ತಿ ದೊರೆಯುವುದು. ಮಹಿಳಾ ಸಂಘಟನೆಯು ಮಾದರಿಯಾಗಬೇಕು~ ಎಂದರು.
ನಿರ್ಗಮಿತ ಅಧ್ಯಕ್ಷೆ ರೂಪಾಭಾಸ್ಕರ್ ಮಾತನಾಡಿ, `ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.
ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಜಾ ಉದಯಶಂಕರ್, ಮಾರ್ಗದರ್ಶಕ ಸಿ.ಬಸಪ್ಪ, ಪಿ.ಚಂದ್ರಪ್ಪ ಮಾತನಾಡಿದರು, ಖಜಾಂಚಿ ಸುಧಾಹರ್ಷ ಅವರು ಜಮಾ-ಖರ್ಚು ವಿವರಗಳನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ಕಾರ್ಯದರ್ಶಿ ಸವಿತಾಮುರಳೀಧರ್ ನಿರೂಪಿಸಿ, ವರದಿ ಮಂಡಿಸಿದರು.
ಸಂಘದ ಉಪಾಧ್ಯಕ್ಷೆ ಶೀಲಾಸುರೇಶ್, ನಗರ್ತ ಯುವಕಸಂಘದ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಎಂ.ಶಿವಪ್ರಸಾದ್, ಸುರೇಶ್, ವಿನಯ್, ಇನ್ನರ್ವೀಲ್ ಸಂಘದ ಪದಾಧಿಕಾರಿಗಳು ಇದ್ದರು. ಭಾರತಿ ಪ್ರಭುದೇವ್ ಸ್ವಾಗತಿಸಿದರು.