ಬಾಗಲಕೋಟೆ: ಹಗಲು-ರಾತ್ರಿ ಎನ್ನದೇ, ಅಪಾಯವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಸಮಾಜಕ್ಕೆ ಅನನ್ಯವಾದುದು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ವಸಂತ ಹನುಮಂತರಾವ್ ಕುಲಕರ್ಣಿ ಹೇಳಿದರು.
ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೋಲು- ಗೆಲುವನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಬೇಕು, ಸೋತವರು ದುರ್ಬಲರು ಎಂದು ಭಾವಿಸಬಾರದು ಎಂದು ತಿಳಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಪೊಲೀಸ್ ಸಿಬ್ಬಂದಿಗೆ ಕ್ರೀಡಾಮನೋಭಾವ ಮತ್ತು ದೈಹಿಕ ದಾರ್ಢ್ಯತೆ ಅತಿ ಮುಖ್ಯ ಎಂದರು. ಪೊಲೀಸ್ ಸಿಬ್ಬಂದಿ ನಡುವ ಸೌಹಾರ್ದತೆ, ಸಹಬಾಳ್ವೆ ಮೂಡಿಸುವ ಉದ್ದೇಶದಿಂದ ಕ್ರೀಡಾಕೂಟವನ್ನು ಪ್ರತಿ ವರ್ಷ ನಡೆಸಲಾಗುತ್ತದೆ ಎಂದು ಹೇಳಿದರು.
ಮೂರು ದಿನ ನಡೆಯುವ ಕ್ರೀಡಾಕೂಟದಲ್ಲಿ ಬಾಗಲಕೋಟೆ ವೃತ್ತ, ಬಾಗಲಕೋಟೆ ನಗರ ವೃತ್ತ, ಜಮಖಂಡಿ ವೃತ್ತ, ಮುಧೋಳ ವೃತ್ತ, ಬೀಳಗಿ-ಬನಹಟ್ಟಿ ವೃತ್ತ, ಹುನಗುಂದ ವೃತ್ತ, ಬಾದಾಮಿ ವೃತ್ತ ಮತ್ತು ಮಹಿಳಾ ಪೊಲೀಸ್ ತಂಡ, ಬಾಗಲಕೋಟೆ ಸಶಸ್ತ್ರ ಪೊಲೀಸ್ ತಂಡ (ಡಿಎಆರ್) ಸೇರಿದಂತೆ ಸುಮಾರು 150 ಕ್ರೀಡಾಪಟುಗಳು ಭಾಗವಹಿಸಿದ್ದರು.
ಕ್ರೀಡಾಕೂಟದ ಆರಂಭದಲ್ಲಿ ಜಿಲ್ಲೆಯ ವಿವಿಧ ವೃತ್ತದ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಅಥ್ಲೀಟ್ ಮೊರಬದ ಕ್ರೀಡಾಜ್ಯೋತಿ ಬೆಳಗಿಸಿದರು. ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಎಸ್.ಬಿ.ದಂಡಿನ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್. ಜಿ.ಪಾಟೀಲ, ಡಿವೈಎಸ್ಪಿ ವೀರನಗೌಡ, ಜಮ ಖಂಡಿ ಡಿಎಸ್ಪಿ ಕಾಂಬಳೆ, ನಿವೃತ್ತ ಎಸ್. ಪಿ.ಮುರನಾಳ ಮತ್ತಿತರರು ಉಪಸ್ಥಿತರಿದ್ದರು.