ಬೆಂಗಳೂರು: ‘ಸಮಾಜದಲ್ಲಿ ಇಂದು ಅಶಾಂತಿ ನೆಲೆಸಿದೆ. ಶಾಂತಿ ಸ್ಥಾಪನೆಗೆ ಶಾಂತಿಗಾಗಿ ಸಾಹಿತ್ಯದಂತಹ ಅಭಿಯಾನಗಳು ಇಂದು ಪ್ರಸ್ತುತವೆನಿಸುತ್ತವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅಭಿಪ್ರಾಯಪಟ್ಟರು. ಶಾಂತಿ ಪ್ರಕಾಶನದ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ‘ಶಾಂತಿಗಾಗಿ ಸಾಹಿತ್ಯ’ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಸ್ಲಾಂ ಧರ್ಮದ ಕುರಿತು ಉಪಯುಕ್ತ ಮಾಹಿತಿಗಳಿರುವ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರಕಾಶನವು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು. ಕವಿ ಡಾ.ಸಿದ್ದಲಿಂಗಯ್ಯ, ‘ಅಶಾಂತಿಯಿಂದ ಬಳಲುತ್ತಿರುವ ಸಮಾಜಕ್ಕೆ ಇಂದು ಶಾಂತಿ ದೊರಕಿಸುವ ಸಾಹಿತ್ಯ ಬೇಕಿದೆ. ಪ್ರಕಾಶನವು ಇಸ್ಲಾಂನ ಉದಾತ್ತ ತತ್ವಗಳು, ಪ್ರವಾದಿಗಳ ಭಾಷಣಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಕನ್ನಡಕ್ಕೆ ಭಾಷಾಂತರಿಸಿ ತಲುಪಿಸುವ ಕೆಲಸ ಮಾಡುತ್ತಿದೆ’ ಎಂದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ‘ಇಸ್ಲಾಂ ಎಂದರೆ ಶಾಂತಿ. ರಾಜಕಾರಣಿಗಳು ಅಧಿಕಾರಕ್ಕಾಗಿ ಸಮಾಜದಲ್ಲಿ ಜಾತಿ, ಧರ್ಮಗಳ ಮಧ್ಯೆ ಬಿರುಕು ಉಂಟುಮಾಡಿದ್ದಾರೆ’ ಎಂದರು. ಬೇಲಿ ಮಠದ ಶಿವಾನುಭವ ಶಿವರುದ್ರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ಸಿಎಂ ಕನಸು
‘ಹೆಸರಿನ ಜೊತೆಯಲ್ಲಿಯೇ ಸಿಎಂ ಎಂಬ ಇನಿಷಿಯಲ್ ಇರುವುದರಿಂದ ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಕನಸು. ಇತ್ತೀಚೆಗೆ ಸರಿಯಾಗಿದೆ ನಿದ್ದೆ ಬರುತ್ತಿಲ್ಲ. ಮುಂದೆ ಒಂದು ದಿನ ಖಂಡಿತವಾಗಿಯೂ ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ. ಆಗಿಯೇ ಆಗುತ್ತೇನೆ’ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.