ಯಲಹಂಕ: ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ನಂತರ ಕೇವಲ ಸ್ವಾರ್ಥಕ್ಕಾಗಿ ಕೆಲಸ ಮಾಡದೆ ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ಅಂಧ ಸಾಧಕಿ ಅಶ್ವಿನಿ ಅಂಗಡಿ ಹೇಳಿದರು.
ಜ್ಞಾನಜ್ಯೋತಿ ಪದವಿಪೂರ್ವ ಕಾಲೇಜು ಮತ್ತು ಅಮ್ಮಾ ಫೌಂಡೇಶನ್ನ ಹೆಲ್್ಪ ಅಂಡ್ ಗ್ರೋ ಸಂಸ್ಥೆ ಹಾಗೂ ರೋಟರಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಉಪನಗರ 4ನೇ ಹಂತದ ಬಿಬಿಎಂಪಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಾಗಲಕೋಟೆಯಲ್ಲಿ ಅಂಧರ ಶಾಲೆ ತೆರೆಯುವ ಉದ್ದೇಶವಿದ್ದು, ಅಲ್ಲಿ ಮಕ್ಕಳಿಗೆ ಕಂಪ್ಯೂಟರ್ ತರಬೇತಿ, ಇಂಗ್ಲಿಷ್ ಜ್ಞಾನ, ನೃತ್ಯ, ಸಂಗೀತ ಹಾಗೂ ಯೋಗದ ಬಗ್ಗೆ ತರಬೇತಿ ನೀಡಿ, ಕಂಪ್ಯೂಟರ್ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಐದನೇ ತರಗತಿಯಿಂದ ಸಾಮಾನ್ಯ ಮಕ್ಕಳು ಕಲಿಯುವ ಶಾಲೆಗೆ ಅವರನ್ನು ಸೇರಿಸಲಾಗುವುದು. ಇದರಿಂದ ಶಿಕ್ಷಕರಿಗೂ ಕಷ್ಟವಾಗುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾ ಫೌಂಡೇಶನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿನತಿ ವಿಶೇಷ ಶಾಲೆಯ ಇಬ್ಬರು ಮಕ್ಕಳಿಗೆ ಗಾಲಿ ಕುರ್ಚಿ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವೀರಶೈವ ಶ್ರೀ ಈಶ್ವರ ಸೇವಾ ಸಮಿತಿ ಅಧ್ಯಕ್ಷ ಎನ್.ಸಿ.ರಾಜಶೇಖರಯ್ಯ, ಅಮ್ಮಾ ಫೌಂಡೇಶನ್ನ ಹೆಲ್ಪ್ ಅಂಡ್ ಗ್ರೋ ಸಂಸ್ಥೆಯ ಅಧ್ಯಕ್ಷ ವಿ.ಕೆ.ರೋಹಿತ್, ರೋಟರಿ ಸಂಸ್ಥೆಯ ವನಿತಾ ನಾರಾಯಣ್, ಜ್ಞಾನಜ್ಯೋತಿ ಕಾಲೇಜಿನ ಪ್ರಾಂಶುಪಾಲ ನಂಜುಂಡಪ್ಪ ಇದ್ದರು.