ದಾವಣಗೆರೆ: ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಹೇಳಿದರು.ನಗರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ನ 100ನೇ ವೈದ್ಯಕೀಯ ಶಿಬಿರದಲ್ಲಿ ಭಾನುವಾರ ಅವರು ಮಾತನಾಡಿದರು.ಟ್ರಸ್ಟ್ ಸತತವಾಗಿ ವೈದ್ಯಕೀಯ ಶಿಬಿರ ನಡೆಸುತ್ತಿದ್ದು, ಸರ್ಕಾರದ ಮಾದರಿಯಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ವ್ಯಕ್ತಿ ಸಮಾಜದ ಋಣ ಪಡೆದಿರುತ್ತಾನೆ.ಉದಾಹರಣೆಗೆ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಸುಮಾರು ರೂ 10 ಲಕ್ಷದಷ್ಟು ಸರ್ಕಾರ ವೆಚ್ಚ ಮಾಡುತ್ತದೆ. ಅದೆಲ್ಲವೂ ತೆರಿಗೆ ಹಣದಿಂದಲೇ ಸಲ್ಲಿಕೆಯಾಗುತ್ತದೆ. ಆದ್ದರಿಂದ ವ್ಯಕ್ತಿ ಸಮಾಜಕ್ಕೆ ಋಣಿಯಾಗಿರಬೇಕಾಗುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಂ. ವಿಶ್ವನಾಥ್ ಮಾತನಾಡಿ, ಟ್ರಸ್ಟ್ 10 ವರ್ಷಗಳ ಹಿಂದೆ ಆರಂಭಿಸಿದ ಆರೋಗ್ಯ ಸೇವೆ.ಇಂದು 100ನೇ ಶಿಬಿರಕ್ಕೆ ಕಾಲಿಟ್ಟಿದೆ. ಎಷ್ಟೋ ಜನರು ಔಷಧಿ ಕೊಂಡರೂ ಉಪಯೋಗಿಸುವುದಿಲ್ಲ.ಅಂಥ ಹೆಚ್ಚುವರಿ ಔಷಧಿಗಳನ್ನು ಸಂಗ್ರಹಿಸಿ ಅಗತ್ಯವುಳ್ಳ ಬಡಜನರಿಗೆ ಒದಗಿಸಲಾಗುತ್ತದೆ. ಅಲ್ಲದೇ ಟ್ರಸ್ಟ್ ವತಿಯಿಂದ ಹಳ್ಳಿಗಳಲ್ಲಿ ‘ಅರಿವು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಇಡೀ ಜಿಲ್ಲೆಯನ್ನು ದತ್ತು ತೆಗೆದುಕೊಂಡು ಆರೋಗ್ಯ ಸೇವೆ ನೀಡಬೇಕೆಂಬ ಆಶಯವಿದೆ ಎಂದು ಹೇಳಿದರು.ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಚನ್ನಗಿರಿ ವಿರೂಪಾಕ್ಷಪ್ಪ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎಚ್.ಆರ್. ಚಂದ್ರಶೇಖರ್ ಇತರರು ಇದ್ದರು.