ಶಹಾಪುರ: ಪ್ರತಿಭಾವಂತ ಯುವಕರಿಗೆ ಬಡತನ ಶಾಪವಾಗಿದೆ. ಸಾಕಷ್ಟು ಪ್ರತಿಭೆಯಿದ್ದರೂ ಆರ್ಥಿಕ ಹಿನ್ನೆಡೆಯಿಂದ ವಿದ್ಯಾರ್ಥಿಗಳು ಓದುವುದನ್ನು ಮೊಟಕುಗೊಳಿಸುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಚನ್ನಪ್ಪಗೋಳ ಚಾರಿಟಬಲ್ ಟ್ರಸ್ಟ್ ಆರ್ಥಿಕ ನೆರವು ನೀಡುವುದರ ಮೂಲಕ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಮೆಚ್ಚುಗೆ ಸಂಗತಿಯಾಗಿದೆ ಎಂದು ಹಿರಿಯ ವಕೀಲ ಭಾಸ್ಕರರಾವ ಮುಡಬೂಳ ಹೇಳಿದರು.
ಪಟ್ಟಣದ ಹೊರವಲಯದ ಮೊರಟಗಿ ಸಭಾಂಗಣದಲ್ಲಿ ಭಾನುವಾರ ಚನ್ನಪ್ಪಗೋಳ ಚಾರಿಟಬಲ್ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದನ್ನು ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಸಂಚಾಲಕ ಅಯ್ಯಪ್ಪ ಚನ್ನಪ್ಪಗೋಳ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನಾವು ನೆರವಿನ ಅಭಯ ನೀಡಬೇಕಾಗಿದೆ. ನಿರಾಶೆಯಿಂದ ಎಲ್ಲವನ್ನು ನಾವು ಕಾಣಬಾರದು. ಭರವಸೆಯ ಬೆಳಕಿನಂತೆ ಒಂದಿಷ್ಟು ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. . ಸಮಾನ ಮನಸ್ಕರು ಇಂತಹ ನಿಸ್ವಾರ್ಥ ಸೇವೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ವೈದ್ಯಾಧಿಕಾರಿ ಡಾ.ರಾಜಾವೆಂಕಟಪ್ಪ ನಾಯಕ, ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್, ನಾಗಪ್ಪ ತ್ರಿವೇದಿ, ಸೋಮರಾಯ ಶಖಾಪೂರ, ಡಾ.ಮಲ್ಲೇಶಿ ದೇವಿಕೇರಿ, ಸಂಗಣ್ಣ ಚೆಟ್ಟಿ, ಮಾರುತಿ, ಅನಂತಮೂರ್ತಿಡಬೀರ, ಪಂಡಿತ ನಿಂಬೂರ, ಬಸವರಾಜ ಕೊಡೆಕಲ್ ಇದ್ದರು.
ಟ್ರಸ್ಟ್ ವತಿಯಿಂದ ಡಾ.ಗುರುರಾಜ ಅರಿಕೇರಿ, ಸುರಪುರ ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಜೇವರ್ಗಿಯ ರೈತ ಮುಖಂಡ ಅಮೃತಗೌಡ ಪಾಟೀಲ್ ಅವರನ್ನು ಸನ್ಮಾನಿಸಿಲಾಯಿತು.