ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಕೆಂಗಾಪುರ ರಾಮಲಿಂಗೇಶ್ವರ ಮಠ

Last Updated 20 ಫೆಬ್ರುವರಿ 2012, 5:40 IST
ಅಕ್ಷರ ಗಾತ್ರ

ಬಸವಾಪಟ್ಟಣ: ನಾಡಿನ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತಿರುವ ಮಠಗಳಲ್ಲಿ ಬಸವಾಪಟ್ಟಣ ಸಮೀಪವಿರುವ ಕೆಂಗಾಪುರದ ರಾಮಲಿಂಗೇಶ್ವರ ಮಠ ತನ್ನದೇ ಖ್ಯಾತಿ ಪಡೆದಿದೆ.

ಪ್ರತಿ ವರ್ಷ ಶಿವರಾತ್ರಿ ಸಮಯದಲ್ಲಿ ಮಠದಲ್ಲಿ ನಡೆಯುವ ಮುಳ್ಳುಗದ್ದುಗೆ ಉತ್ಸವ, ಸರ್ವಧರ್ಮ ಸಮ್ಮೇಳನ, ಉಚಿತ ಸಾಮೂಹಿಕ ವಿವಾಹದಂತಹ ಜನಹಿತ ಕಾರ್ಯಗಳೊಂದಿಗೆ ನಿತ್ಯ ಅನ್ನ ದಾಸೋಹ, ಜ್ಞಾನ ದಾಸೋಹ ಜನ ಸೇವೆಗೆ ಸಾಕ್ಷಿಯಾಗಿದೆ.

ಸುಮಾರು 42 ವರ್ಷಗಳ ಹಿಂದೆ ಕೆಂಗಾಪುರದ ರಾಮಪ್ಪ ಅವರಿಗೆ ಆದ ದೈವೀಪ್ರೇರಣೆ ಅವರಲ್ಲಿ ಧಾರ್ಮಿಕ ಶಕ್ತಿ ಬೆಳೆಯಲು ಕಾರಣವಾಯಿತು.

ನಂತರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗ ಬ್ರಹ್ಮ ಸ್ವಾಮಿಗಳೆಂಬ ಮಹಾನ್ ಪುರುಷರ ಪ್ರೇರಣೆ ಅವರನ್ನು ಆಧ್ಯಾತ್ಮಿಕ ಲೋಕದತ್ತ ಕರೆದೊಯ್ದಿತು. ಇದರ ಪರಿಣಾಮವಾಗಿ ಅವರು ಸನ್ಯಾಸ ಸ್ವೀಕರಿಸಿ ರಾಮಲಿಂಗೇಶ್ವರ ಸ್ವಾಮೀಜಿಯಾಗಿ ಸಮಾಜದ ದೀನ, ದಲಿತರು, ಬಡವರ ಸೇವೆಗೆ ನಿಂತರು.

ಪ್ರತಿ ತಿಂಗಳ ಅಮಾವಾಸ್ಯೆಯಂದು ಸ್ವಾಮೀಜಿ ನಡೆಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಬಡವ, ಬಲ್ಲಿದರೆನ್ನದೇ ಭಾಗವಹಿಸುವ ಎಲ್ಲರ ಕಷ್ಟಗಳಿಗೆ ಪರಿಹಾರಗಳನ್ನು ಸೂಚಿಸಿ, ಅವರ ನೋವು ನಿವಾರಣೆಗೆ ಕಂಕಣ ಬದ್ಧರಾಗಿದ್ದಾರೆ.

ಇದರೊಂದಿಗೆ ಬಡ ವಿದ್ಯಾರ್ಥಿಗಳಿಗಾಗಿ ಹಾಗೂ ಸಮಾಜ ಸೇವೆಗಾಗಿ ರಾಮಲಿಂಗೇಶ್ವರ ಸೇವಾ ಟ್ರಸ್ಟ್, ರಾಮಲಿಂಗೇಶ್ವರ ಎಜುಕೇಷನಲ್‌ಟ್ರಸ್ಟ್  ಸ್ಥಾಪಿಸಿ ಅದರ ಅಡಿಯಲ್ಲಿ ಕೆಂಗಾಪುರದಲ್ಲಿ ಪೂರ್ವಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ಶಿಕ್ಷಕರ ತರಬೇತಿ ಕೇಂದ್ರ, ಪದವಿ ಪೂರ್ವ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ. ಭದ್ರಾವತಿ ತಾಲೂಕಿನ ನಿಂಬೆಗೊಂದಿ ಗ್ರಾಮಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ಬಡ ವಿದ್ಯಾರ್ಥಿಗಳಿಗಾಗಿ ತಮ್ಮ ಸಂಸ್ಥೆಯಿಂದಲೇ ಶುಲ್ಕ ಭರಿಸಿ ಅವರಿಗೆ ಉಚಿತವಾಗಿ ಸಮವಸ್ತ್ರ ಮತ್ತು ಪುಸ್ತಕ ಒದಗಿಸಿರುವುದು, ಪದವಿಪೂರ್ವ ಕಾಲೇಜು ಮತ್ತು ಶಿಕ್ಷಕ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ, ವಾಹನ ವ್ಯವಸ್ಥೆ ಮಾಡಿರುವುದು ಸ್ವಾಮೀಜಿಯ ಸೇವೆಗೆ ಮೆರುಗನ್ನು  ನೀಡಿದೆ.

ರಾಮಲೀಂಗೇಶ್ವರ ಸೇವಾ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಉಚಿತ ಸಾಮೂಹಿಕ ವಿವಾಹಗಳು, ಸಮಾಜ ಸೇವಾಕಾರ್ಯಗಳು ನಡೆಯಲು ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ, ಅನಾಥಾಲಯ ಹಾಗೂ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂಬ ಮಹಾದಾಸೆ ಹೊಂದಿದ್ದಾರೆ.

ಮುಖ್ಯ ರಸ್ತೆಯಿಂದ ದೂರವಿರುವ ಕೆಂಗಾಪುರಕ್ಕೆ ಉತ್ತಮ ರಸ್ತೆ ಹಾಗೂ ಇಲ್ಲಿನ ಸೂಳೆಕೆರೆ ಹಳ್ಳಕ್ಕೆ ಎತ್ತರ ಸೇತುವೆ ಮತ್ತು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಿಕೊಟ್ಟರೆ ನನ್ನ ಜನ ಸೇವೆಗೆ ಉತ್ತಮ ಅವಕಾಶವಾಗುತ್ತದೆ ಎಂದು ಸ್ವಾಮೀಜಿ ನುಡಿಯುತ್ತಾರೆ.                                                                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT