ಬೆಂಗಳೂರು: `ನಾನು ಸಮಾಜವಾದಿ ಚಿಂತಕರ ಚಾವಡಿಯ ಹೊರವಲಯದಲ್ಲಿದ್ದವನು. ಸಮಾಜವಾದಿ ದೇವಾಲಯದ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲು ಅವಕಾಶ ದೊರೆಯಲಿಲ್ಲ~ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಹೇಳಿದರು.
ಸಮಾಜವಾದಿ ಅಧ್ಯಯನ ಕೇಂದ್ರವು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜವಾದಿ ನಾಯಕ ಅಶೋಕ ಮೆಹತಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಹಲವು ಜನಪರ ಯೋಜನೆಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ ಅಶೋಕ ಮೆಹತಾ ಅವರ ದೂರದರ್ಶಿತ್ವ ಮತ್ತು ಚಾಣಾಕ್ಷತನದಿಂದ ಪ್ರಸಿದ್ಧಿಯಾಗಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಪ್ರಸ್ತುತ ರಾಜಕಾರಣಿಗಳು ಅನುಸರಿಸುತ್ತಿಲ್ಲ~ ಎಂದು ಖೇದ ವ್ಯಕ್ತಪಡಿಸಿದರು.
`ಸಮಾಜವಾದಿ ಪಕ್ಷವು ಸಮಾನತೆ ಮತ್ತು ಸ್ವಾಂತಂತ್ರ್ಯವನ್ನು ಮೂಲ ಧ್ಯೇಯವಾಗಿಸಿಕೊಂಡಿರುವುದು ಮಾತ್ರವಲ್ಲ, ಬದ್ದತೆಯನ್ನೂ ಉಳಿಸಿಕೊಂಡಿತ್ತು. ಆದರೆ ಸಮಾಜವಾದಿ ಪಕ್ಷದ ಅಂದಿನ ಕಾರ್ಯಕರ್ತರಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿದ್ದವು~ ಎಂದರು.
ಇದೇ ಸಂದರ್ಭದಲ್ಲಿ ಅಶೋಕ ಮೆಹತಾ ಕುರಿತು ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಶಾಸಕರಾದ ವಿ.ಆರ್.ಸುದರ್ಶನ್, ನೆ.ಲ.ನರೇಂದ್ರಬಾಬು ಇತರರು ಉಪಸ್ಥಿತರಿದ್ದರು.