ಮಕ್ಕಳು ದೇಶದ ಅತ್ಯಂತ ಪ್ರಮುಖ ಆಸ್ತಿ ಎಂದು ಭಾರತದ ೧೯೭೪ರ ರಾಷ್ಟ್ರೀಯ ಮಕ್ಕಳ ನೀತಿಯ ಮೂಲಕ ಘೋಷಿಸಿರುವ ಸರ್ಕಾರವು, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿಹಾಕುವ ಮೂಲಕ ದೃಢಪಡಿಸಿದೆ. ಇದನ್ನು ಆಧರಿಸಿ ೨೦೧೩ರ ರಾಷ್ಟ್ರೀಯ ಮಕ್ಕಳ ನೀತಿ ಮಕ್ಕಳೆಂಬ ಮಾನವ ಸಂಪನ್ಮೂಲದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ರಚನಾತ್ಮಕ ಕೆಲಸಗಳಿಗೆ ಒತ್ತು ನೀಡಿ, ಎಲ್ಲಾ ಮಕ್ಕಳಿಗೆ ಸಮಾನ ಅವಕಾಶ ಮತ್ತು ಶಿಕ್ಷಣ ನೀಡುವುದು ದೇಶದ ಆದ್ಯ ಕರ್ತವ್ಯವೆಂದು ಪ್ರತಿಪಾದಿಸಿದೆ.
ಆದರೆ ‘ಸೇವ್ ದಿ ಚೈಲ್ಡ್ ’ ಸ್ವಯಂಸೇವಾಸಂಸ್ಥೆ ವರದಿಯ ಪ್ರಕಾರ, ಭಾರತದಲ್ಲಿ ಮಕ್ಕಳ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಅದು ಇತರೆಲ್ಲ ದೇಶಗಳ ಹೋಲಿಕೆಯ ಪಟ್ಟಿಯಲ್ಲಿ ೧೧೨ನೇ ಸ್ಥಾನವನ್ನು ಪಡೆದಿದೆ. ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಇದು ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ವರದಿ ತಿಳಿಸುತ್ತದೆ.
ದೇಶವೊಂದರ ಅಭಿವೃದ್ಧಿಯನ್ನು ಅಳೆಯುವ ಪ್ರಮುಖ ಮಾನದಂಡಗಳಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯರಹಿತ ಬದುಕಿನ, ಶಿಕ್ಷಣದ ಅವಕಾಶ ಮತ್ತು ಹಕ್ಕುಗಳನ್ನು ನೀಡಬೇಕು. ಆದರೆ ಭಾರತ ನಿಧಾನಕ್ಕೆ ಈ ಆಶಯದಿಂದ ದೂರ ಸರಿಯುತ್ತಿದ್ದು, ಹಿಂದೆ ಜಾತಿ ಆಧಾರಿತವಾಗಿ ಅಸಮಾನತೆಯಿಂದ ನರಳುತ್ತಿದ್ದ ಶಿಕ್ಷಣ ಇಂದು ಬಂಡವಾಳಶಾಹಿಯ ಕೈ ಸೇರಿ ವರ್ಗಾಧಾರಿತವಾದ ಶ್ರೇಣೀಕೃತ ವ್ಯವಸ್ಥೆಯಾಗಿ ಬೇರುಬಿಟ್ಟಿದೆ. ಇಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದ್ದು ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಹೆಚ್ಚು ಮೌಲ್ಯದ ಶಿಕ್ಷಣ ಎಂಬಂತಾಗಿದೆ. ಇದರಿಂದ ಶಿಕ್ಷಣ ಮಾರುಕಟ್ಟೆಯ ಸರಕಾಗಿ ಬಿಕರಿಗೊಳ್ಳುತ್ತಿದೆ.
ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಮಹಿಳೆ-, ತಳಸಮುದಾಯ ಹಾಗೂ ಬಡವರ್ಗದವರು ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ, ಮುಖ್ಯವಾಹಿನಿಯಿಂದ ಅಂಚಿಗೆ ಸರಿಯುತ್ತಿದ್ದಾರೆ. ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಆದರೆ ಸಮಾನ ಶಿಕ್ಷಣದ ಕುರಿತ ಎಲ್ಲಾ ನೀತಿ, ಆಯೋಗಗಳ ಸಲಹೆಗಳನ್ನೂ ನಿರ್ಲಕ್ಷಿಸಿ ಸರ್ಕಾರ ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಖಾಸಗಿಯವರಲ್ಲಿ ಒತ್ತೆಯಿಟ್ಟು, ಸಮಾಜದಲ್ಲಿ ಅಸಮಾನತೆಯನ್ನು ತಾನೇ ಹೆಚ್ಚು ಮಾಡುತ್ತಿದೆ. ಹೀಗಾಗಿ ಇಂದು ಸಮಗ್ರ ಸಮಾನಶಾಲಾ ವ್ಯವಸ್ಥೆಯುಳ್ಳ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಬೇಕಾಗಿದೆ.
ಮಗು ಕೇಂದ್ರಿತ ಶಿಕ್ಷಣವನ್ನು ಯೋಚಿಸುವ ಯಾವುದೇ ದೇಶವಾದರೂ ೩–೬ ವರ್ಷ ವಯಸ್ಸಿನ ಮಕ್ಕಳ ಶಿಕ್ಷಣದಿಂದಲೇ ತಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ. ಆದರೆ ನಮ್ಮ ಸರ್ಕಾರದ ಯಾವುದೇ ರಾಷ್ಟ್ರೀಯ ಶಿಕ್ಷಣ ನೀತಿಯೂ ೩–-೬ ವರ್ಷ ವಯೋಮಾನದ ಮಕ್ಕಳ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ! ೦–೬ ವರ್ಷದ ಮಕ್ಕಳು ಪೋಷಣೆಗಷ್ಟೇ ಪಾತ್ರರೆಂಬ ಅವೈಜ್ಞಾನಿಕ ನಂಬಿಕೆಯಿಂದಲೇ ಸರ್ಕಾರಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.
ಕೇಂದ್ರ ಸರ್ಕಾರದ ಯೋಜನೆಯಂತೆ ೦–-೬ ವರ್ಷದ ಮಕ್ಕಳ ಪೋಷಣೆಗಾಗಿ , ದೇಶದಾದ್ಯಂತ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಇರುತ್ತಾರೆಂಬುದು ಗಮನಾರ್ಹ. ಪೋಷಣೆಯ ಜೊತೆಗೆ ಅಂಗನವಾಡಿ ಕೇಂದ್ರಗಳು ೩–-6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡಬೇಕೆಂಬ ನಿರ್ದೇಶನವೂ ಸರ್ಕಾರದಿಂದಿದೆ. ಆದರೆ ಇದಕ್ಕೆ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ, ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲಿ, ಪ್ರತ್ಯೇಕ ಶಾಲಾ ಕೊಠಡಿಯಾಗಲಿ, ತರಬೇತಾದ ಬೋಧನಾ ಸಿಬ್ಬಂದಿಯಾಗಲಿ ಇಲ್ಲ. ಇದು ಮಕ್ಕಳ ಪೋಷಣಾ ವ್ಯವಸ್ಥೆಯಾಗಿ ಆರೋಗ್ಯ ಇಲಾಖೆಯಡಿ ದಾಖಲಾಗುತ್ತದೆಯೇ ಹೊರತು, ಶೈಕ್ಷಣಿಕ ವ್ಯವಸ್ಥೆಯಾಗಿ ಸರ್ಕಾರದಲ್ಲಿ ದಾಖಲಾಗುವುದೇ ಇಲ್ಲ! ಹೀಗಾಗಿ ಅದೊಂದು ಪಾಲಿಸುವ, ಪೋಷಿಸುವ, ಆಡಿಸುವ ಮನೆಯಷ್ಟೇ ಹೊರತು ವಿದ್ಯಾಕೇಂದ್ರ ಅಲ್ಲವೇ ಅಲ್ಲ! ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆ ಹಿಂದುಳಿದ ಮಕ್ಕಳಿಗೆ ಇಲ್ಲಿಂದಲೇ ಪ್ರಾರಂಭವಾಗಿ ದೊಡ್ಡ ಕಂದಕವನ್ನೇ ನಿರ್ಮಿಸಿದೆ.
ಇದೇ ಸಂದರ್ಭದಲ್ಲಿ ಸರ್ಕಾರದ ಈ ದಿವ್ಯ ನಿರ್ಲಕ್ಷ್ಯ ಮತ್ತು ನಿರ್ಲಿಪ್ತತೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶೈಕ್ಷಣಿಕ ವ್ಯವಸ್ಥೆ ಸರ್ಕಾರದ ಲಂಗುಲಗಾಮಿಲ್ಲದೇ, ಸರ್ಕಾರಿ ವ್ಯವಸ್ಥೆಯನ್ನೇ ನುಂಗಿ ನೊಣೆಯುತ್ತಿದೆ. ೩–೬ ವರ್ಷ ವಯಸ್ಸಿನ ಖಾಸಗಿ ಕಿಂಡರ್ಗಾರ್ಟನ್ನಲ್ಲಿ ಕಲಿಯುವ ಮಕ್ಕಳು ನರ್ಸರಿ, ಎಲ್ಕೆಜಿ, ಯುಕೆಜಿಗಳನ್ನು ಈ ಶಿಕ್ಷಣಕ್ಕಾಗಿಯೇ ಸಿದ್ಧಪಡಿಸಿದ ನಿಗದಿತ ನಮೂನೆಯ ಪಠ್ಯವನ್ನಾಧರಿಸಿ ಶಿಸ್ತುಬದ್ಧವಾಗಿ, ಆಂಗ್ಲ ಮಾಧ್ಯಮದಲ್ಲಿಯೇ ಕಲಿಯುತ್ತಾರೆ! ವಿಪರ್ಯಾಸವೆಂದರೆ ಖಾಸಗಿಯಲ್ಲಿ ಕಲಿಯುತ್ತಿರುವ ಈ ೩–೬ ವರ್ಷಗಳ ಮಕ್ಕಳು ಸರ್ಕಾರದಲ್ಲಿ ಎಲ್ಲಿಯೂ ದಾಖಲಾಗುವುದಿಲ್ಲ! ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಲೂ ಪರವಾನಗಿ ತೆಗೆದುಕೊಳ್ಳಬೇಕಿರುವ ಈ ಕಾಲದಲ್ಲಿ ಬಹುಸಂಖ್ಯಾತ ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ ನೀಡುತ್ತಿರುವ ಈ ಖಾಸಗಿ ಶೈಕ್ಷಣಿಕ ಗುತ್ತಿಗೆದಾರರು ಸರ್ಕಾರದ ಯಾವುದೇ ಇಲಾಖೆಯಡಿಯೂ ನೋಂದಣಿಯಾಗುವ ಅವಶ್ಯಕತೆಯಿಲ್ಲ! ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರ ಇತ್ತೀಚೆಗೆ ದಾಖಲೀಕರಣದ ಬಗ್ಗೆ ಸಣ್ಣ ಪ್ರಯತ್ನಗಳಾಗುತ್ತಿವೆಯಾದರೂ, ಯಾವ ಕಠಿಣ ಕ್ರಮವನ್ನೂ ಕೈಗೊಂಡಿಲ್ಲ.
ಯಾವ, ಯಾರ ಒಪ್ಪಿಗೆಯನ್ನೂ ಪಡೆಯದೇ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ, ಬೇರೆಬೇರೆ ಮಾದರಿಯ, ಶಿಕ್ಷಣ ಕ್ರಮದ ಇಂತಹ ಆಂಗ್ಲ ಮಾಧ್ಯಮದ ಖಾಸಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದರೂ, ಕೇಳುವವರೇ ಇಲ್ಲ! ಇಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಶಿಕ್ಷಣದ ಬಗ್ಗೆಯಾಗಲೀ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಕುರಿತಾಗಲೀ, ಸರ್ಕಾರಿ ನಿಯಂತ್ರಣದ ಬಗೆಗಾಗಲೀ ಸರ್ಕಾರ ಒಮ್ಮೆಯೂ ಯೋಚಿಸಿಯೇ ಇಲ್ಲ! ಇನ್ನು ಅಧ್ಯಯನ, ಸಮೀಕ್ಷೆ, ದಾಖಲೀಕರಣ ದೂರದ ಮಾತು! ಹೀಗಾಗಿ ಇತ್ತ ಖಾಸಗಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ, ಅಥವಾ ಸರ್ಕಾರದ ಅಂಗನವಾಡಿಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ೩–೬ ವರ್ಷ ವಯಸ್ಸಿನ ಮಕ್ಕಳು ಸರ್ಕಾರದ ಯಾವುದೇ ಶೈಕ್ಷಣಿಕ ವ್ಯವಸ್ಥೆಯಡಿ ದಾಖಲಾಗುವುದೇ ಇಲ್ಲ! ಹಾಗಾದರೆ ಮಕ್ಕಳ ಕುರಿತು ಸರ್ಕಾರಕ್ಕೆ ಯಾವ ಜವಾಬ್ದಾರಿ, ಕಾಳಜಿಗಳಿವೆಯೆಂದು ಭಾವಿಸೋಣ?
ಆಧುನಿಕತೆಯೋ, ಆಂಗ್ಲ ಭಾಷಾ ಪ್ರಭಾವವೋ ಒಟ್ಟಿನಲ್ಲಿ ಇಂತಹ ಆಂಗ್ಲ ಮಾಧ್ಯಮದ ಖಾಸಗಿ ಪೂರ್ವ ಪ್ರಾಥಮಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಣ ಕೊಡಿಸುವ ಬಹುಸಂಖ್ಯಾತ ಪೋಷಕರು, ಆರು ವರ್ಷದ ನಂತರ ಮತ್ತೆ ತಮ್ಮ ಮಕ್ಕಳನ್ನು ಖಾಸಗಿಯಿಂದ ಸರ್ಕಾರಿ ಶಾಲೆಗೆ, ಕನ್ನಡ ಮಾಧ್ಯಮಕ್ಕೆ ಸೇರಿಸುವ ಮನಸ್ಸು ಮಾಡುತ್ತಾರೆಯೇ? ಹೀಗೆಂದೇ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಹುಸಂಖ್ಯೆಯಲ್ಲಿ ಮುಚ್ಚಿಹೋಗುತ್ತಿವೆ. ಸರ್ಕಾರ ಜಾಣ ಕುರುಡು, ಕಿವುಡಿನ ನಟನೆಯಾಡುತ್ತಾ, ಸರ್ಕಾರಿ ಶಾಲೆಗೆ ಮಕ್ಕಳೇ ಬರುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾ, ಗುಟ್ಟಾಗಿ ಖಾಸಗಿ ಶೈಕ್ಷಣಿಕ ವ್ಯವಸ್ಥೆಯನ್ನು ತಾನೇ ಕೊಬ್ಬಿಸುತ್ತಾ, ತನ್ನ ತಲೆಯ ಮೇಲೆಯೇ ಚಪ್ಪಡಿ ಎಳೆದುಕೊಳ್ಳುತ್ತಿದೆ!
ಹೀಗೆಂದೇ ಸರ್ಕಾರ ಇದುವರೆಗೆ ಗಮನಹರಿಸದ, ಯಾವ ಶಿಸ್ತುಬದ್ಧ ಕಠಿಣ ಕ್ರಮವನ್ನೂ ಕೈಗೊಳ್ಳದ, ತನ್ನ ತಳಮಟ್ಟದ ಶೈಕ್ಷಣಿಕ ವ್ಯವಸ್ಥೆಯಡಿ ದಾಖಲೆಯೇ ಮಾಡಿಲ್ಲದ, ೩–-೬ ವರ್ಷದ ಮಕ್ಕಳ ಪೂರ್ವ ಪ್ರಾಥಮಿಕ ಹಂತದಲ್ಲಿ ಮೊದಲು ಏಕರೂಪದ ಸಮಾನಶಿಕ್ಷಣ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಪ್ರಯತ್ನವನ್ನು ತುರ್ತಾಗಿ, ಸಮರ್ಥವಾಗಿ ಮಾಡುವುದು ಮುಖ್ಯವಾಗಿದೆ. ಆ ನಂತರ ಹಂತ ಹಂತವಾಗಿ ಪ್ರಾಥಮಿಕ ಶೈಕ್ಷಣಿಕ ವ್ಯವಸ್ಥೆಯನ್ನೂ ಇದರಡಿಗೆ ತರಬಹುದು. ಹೀಗಾದಾಗ ಸರ್ಕಾರಿ ಶಿಕ್ಷಣ ವ್ಯವಸ್ಥೆ ತನ್ನಂತೆ ತಾನೇ ಬಲಗೊಳ್ಳುವುದು ನಿರ್ವಿವಾದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.