ಬನಹಟ್ಟಿ: `ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು' ಎಂದು ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ಸುಗ್ಗಮದ ತಿಳಿಸಿದರು.
ಎಸ್ಟಿಸಿ ಕಾಲೇಜಿನ ಸಭಾಭವನದಲ್ಲಿ ಬಾಗಲಕೋಟೆಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ಥಳೀಯ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಜನತಾ ಶಿಕ್ಷಣ ಸಂಘದ ಎಸ್ಆರ್ಎ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಕಾರ್ಯಾಗಾರದ ಪ್ರಥಮ ಅಧಿವೇಶನದಲ್ಲಿ `ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ ತಳಹದಿ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ. ಹಕ್ಕುಗಳ ಜೊತೆಗೆ ಸಂವಿಧಾನ ನಮಗೆ ಕೆಲವು ಕರ್ತವ್ಯಗಳನ್ನು ನೀಡಿದೆ ಎಂದು ಡಾ.ಸುಗ್ಗಮದ ತಿಳಿಸಿದರು.
ಸಿವಿಲ್ ನ್ಯಾಯಾಧೀಶೆ ಎನ್.ಎಂ.ಇಚ್ಚಂಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜನತಾ ಶಿಕ್ಷಣ ಸಂಘದ ಅಧ್ಯಕ್ಷ ಎಂ.ಜಿ.ಕೆರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಮಖಂಡಿಯ ಬಿಆರ್ಸಿ ಅಧಿಕಾರಿ ಗೀತಾ ಬಟ್ಲದ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಪಿಎಸ್ಐ ಖಿಲಾರಿ, ಸಿಆರ್ಪಿ ಆರ್.ಎಸ್.ರೋಣದ, ಎಸ್ಆರ್ಎ ಪ್ರೌಢಶಾಲೆಯ ಉಪ ಪ್ರಾಚಾರ್ಯ ಜಿ.ಎಂ.ಪಟೇಲ, ವಕೀಲರಾದ ಸುರೇಶ ಗೊಳಸಂಗಿ, ಕೆ.ಡಿ.ತುಬಚಿ ಮತ್ತು ಎ.ಎಂ.ಪೆಂಡಾರಿ ಉಪಸ್ಥಿತರಿದ್ದರು.