ಪ್ರಜಾಪ್ರಭುತ್ವದ ಮೇಲೆ ನಡೆದ ಮಾರಕ ಪ್ರಹಾರ ಎಂದೇ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ದಾಖಲಾದ ತುರ್ತು ಸ್ಥಿತಿಯ (1975) ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ತಹತಹಿಸಿದ ಮನಸ್ಸುಗಳ ಕನಸಿನ ಕೂಸು ‘ಸಮುದಾಯ’. ಅಸ್ತಿತ್ವಕ್ಕೆ ಬಂದ ದಿನದಿಂದಲೂ ಜನಪರ, ಮೌಲ್ಯಗಳತ್ತ ಸ್ಪಂದಿಸುತ್ತಿದೆ.
ಸಮಾಜಮುಖಿ ಚಳವಳಿಯೊಂದಿಗೆ ಬೆಸೆದುಕೊಂಡು ಅನೇಕ ವರ್ಷಗಳಿಂದ ಜನಸಂಸ್ಕೃತಿ ಉತ್ಸವ ನಡೆಸುತ್ತ ಬಂದಿದೆ. ಈ ಬಾರಿಯ ಉತ್ಸವ ಟ್ಯಾಗೋರರ 150 ನೇ ಜನ್ಮಾಚರಣೆ ಭಾಗವಾಗಿ ‘ಪ್ರಜಾವಾಣಿ’, ಇಂದಿರಾ ಗಾಂಧಿ ಮುಕ್ತ ವಿವಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಬಂಗಾಳಿ ಸಂಘಟನೆ, ಕರ್ನಾಟಕ ನಾಟಕ ಮತ್ತು ಜನಪದ ಅಕಾಡೆಮಿಗಳು, ಕನ್ನಡ ಸಂಸ್ಕೃತಿ ಮತ್ತು ಯುವಜನ ಸೇವಾ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿದೆ.
ಇದರಲ್ಲಿ ಶನಿವಾರದಿಂದ ಬುಧವಾರದವರೆಗೆ (ಫೆ. 12 ರಿಂದ 16) ರವೀಂದ್ರ ಕಲಾಕ್ಷೇತ್ರದಲ್ಲಿ ಟ್ಯಾಗೋರರ ನಾಟಕಗಳು, ಕೃತಿ ಕುರಿತು ವಿಚಾರ ಸಂಕಿರಣ, ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನಗಳು ನಡೆಯಲಿವೆ. ಉದ್ಘಾಟನೆಯಲ್ಲಿ ರವೀಂದ್ರ ಸಂಗೀತ, ಸಮಾರೋಪದಲ್ಲಿ ಮಣಿಪುರಿ ಮತ್ತು ಕರ್ಣಾಟಕ ಜನಪದ ನೃತ್ಯಗಳು ವಿಶೇಷ ವಿಶೇಷ ಆಕರ್ಷಣೆ.