ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧವಾಗಿ ಬೆಳೆದು ನಿಂತ ಹುರುಳಿ ಬೆಳೆ

Last Updated 11 ಡಿಸೆಂಬರ್ 2013, 6:00 IST
ಅಕ್ಷರ ಗಾತ್ರ

ಗಜೇಂದ್ರಗಡ: ಈ ಬೆಳೆಗೆ ತೇವಾಂಶದ ಹಂಗಿಲ್ಲ, ಖರ್ಚಿನ ಮಾತಿಲ್ಲ, ಕೀಟಬಾಧೆ, ರೋಗ–ರುಜಿನ­ಗಳ ಸುಳಿವೇ ಇಲ್ಲ. ಬೆಳೆಯ ಫಸಲಿನ ರಾಶಿ ವೇಳೆ ದೊರೆಯುವ ಹೊಟ್ಟೂ ಸಹ ದೊಡ್ಡ ಆದಾಯವನ್ನು ನೀಡುತ್ತದೆ. ಒಂದರ್ಥ­ದಲ್ಲಿ ಕೃಷಿಕ ಸಮೂಹದ ಬಹುನಿರೀಕ್ಷಿತ ವಾಣಿಜ್ಯ ಬೆಳೆ!

ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶದ ಮಳೆ ಆಶ್ರಿತ ಕೃಷಿಕ ಸಮೂಹದ ನೆಚ್ಚಿನ ಬೆಳೆ. ಅಲ್ಲದೆ, ತೀರಾ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಕರೆಯಲ್ಪಡುವ ‘ಹುರುಳಿ’ ಬೆಳೆ ಪ್ರಸಕ್ತ ವರ್ಷ ಈ ಹಿಂದಿನ ವರ್ಷಗಳಿಗಿಂತ ಸಮೃದ್ಧವಾಗಿ ಬೆಳೆದು ಹಸಿರಿನಿಂದ ಹೂಂಕರಿ­ಸುತ್ತಿದೆ. ಕೃಷಿಕ ಸಮೂಹದ ಭರವಸೆಗಳನ್ನು ಇಮ್ಮಡಿಗೊಳಿಸಿದೆ.

ಮಸಾರಿ ಪ್ರದೇಶದ ಸಾಗುವಳಿ ಜಮೀನು­ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿಕೊಳ್ಳಲು ಸಾಧ್ಯವಾಗದ ಹಾಗೂ ಕೊಳವೆ ಬಾವಿಯಲ್ಲಿನ ಅಂತರ್ಜಲ ಕಣ್ಮರೆಯಾದಾಗ ಅನಿವಾರ್ಯ­ವಾಗಿ ಬೆಳೆಯಲಾಗುವ ಹುರುಳಿ ಬೆಳೆ ಈ ಪ್ರದೇಶದ ಕೃಷಿಕ ಸಮೂಹದ ಬಹು ನಿರೀಕ್ಷಿತ ಬೆಳೆ. ಭೀಕರ ಬರವಿದ್ದರೂ ಸಮೃದ್ಧವಾಗಿ ಬೆಳೆದು ನಿಂತು ಅನ್ನದಾತನ ಸಂಕಷ್ಟ ನಿರ್ವಹಣೆಯಲ್ಲಿ ಹಾಗೂ ಕೃಷಿಕ ಮಿತ್ರ ಎತ್ತು, ಜಾನುವಾರುಗಳ ತುತ್ತಿನ ಚೀಲ ತುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಹಿರಿಮೆ ಹುರುಳಿ ಬೆಳೆಗಿರುವುದು ಆಶ್ಚರ್ಯವಾದರೂ ಸತ್ಯ.

ಅತ್ಯಂತ ಕಡಿಮೆ ಅವಧಿಯಲ್ಲಿ ಕೃಷಿಕ ಕೈಸೇರುವ ಬೆಳೆ ಎಂಬ ಹೆಗ್ಗಳಿಕೆ ಹುರುಳಿಗಿದೆ. ಎಕರೆ ಹುರುಳಿ ಬೆಳೆಯಲು ಬಿತ್ತನೆ ಬೀಜ, ಗಳೆ, ಹಾಗೂ ಬೆಳೆ ನಿರ್ವಹಣೆ ಸೇರಿ ₨ 2,000 ಖರ್ಚಾಗುತ್ತದೆ. ಆದರೆ ಬಿತ್ತನೆ ಮಾಡಿದ 60 ರಿಂದ 70 ದಿನಗಳೊಳಗಾಗಿ ಹುರುಳಿ ಫಸಲು ಕೃಷಿಕರ ಕೈ ಸೇರುತ್ತದೆ. ಬಿತ್ತನೆ ಬಳಿಕ ಒಂದು ಬಾರಿ ಯಡಿ (ಎತ್ತುಗಳಿಂದ ಕಸ ತೆರವುಗೊಳಿಸುವುದು) ಕಾರ್ಯ ಕೈಗೊಂಡರೆ ಸಾಕು ನಿರೀಕ್ಷಗೂ ಮೀರಿ ಇಳುವರಿ ಪಡೆಯಬಹುದಾಗಿದೆ.

‘ಎಕರೆಗೆ ಕನಿಷ್ಠ 3 ರಿಂದ 4 ಕ್ವಿಂಟಲ್‌ ಇಳುವರಿ ಪಡೆಯಹುದಾಗಿದೆ. ಬಿತ್ತನೆ ಹಾಗೂ ನಿರ್ವಹಣೆಯ ಖರ್ಚನ್ನು ತೆಗೆದು ಎಕರೆ­ಯೊಂದಕ್ಕೆ ಕನಿಷ್ಠ ₨ 5,000 ಲಾಭ ನಿರೀಕ್ಷೆ ಮಾಡ­ಬಹುದಾಗಿದೆ. ಅಲ್ಲದೆ ಹುರುಳಿ ರಾಶಿ ಪ್ರಕ್ರಿಯೆಯಿಂದ ದೊರೆಯುವ ಹೊಟ್ಟಿಗೆ ಬಾರಿ ಬೇಡಿಕೆ ಇದೆ. ಜಾನುವಾರುಗಳ ನೆಚ್ಚಿನ ಹೊಟ್ಟುಗಳಲ್ಲಿ ಅಗ್ರ ಸ್ಥಾನವಿದೆ.

ಹೀಗಾಗಿಯೇ ಟ್ಯ್ರಾಕ್ಟರ್‌ ಹುರಳಿ ಹೊಟ್ಟಿಗೆ ₨ 5,000 ರಿಂದ ₨ 6,000 ದರವಿದೆ. ಹುರುಳಿ ಹೊಟ್ಟನ್ನು ಖರೀದಿಸಲು ಕೃಷಿಕರು ನಾ ಮುಂದು, ತಾ ಮುಂದು ಎಂದು ಮುಗ್ಗಿ ಬೀಳುತ್ತಾರೆ. ಹೀಗಾಗಿ ಹುರುಳಿ ಬೆಳೆಗಾರರಿಗೆ ಫಸಲಿಗಿಂತ ಹೊಟ್ಟಿನಲ್ಲಿ ಹೆಚ್ಚಿನ ಲಾಭವಿದೆ’ ಎನ್ನುತ್ತಾರೆ ಹುರುಳಿ ಬೆಳೆದ ರೈತ ಶರಣಪ್ಪ ಕನ್ಯಾಳ.

‘ಹುರುಳಿಗೆ ಮಾರುಕಟ್ಟೆಯಲ್ಲಿ ಬಹುತೇಕ ಸ್ಥಿರ ಬೆಲೆ ಇರುತ್ತದೆ. ಹುರುಳಿಗೆ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಇರುವುದನ್ನು ಅರಿತಿರುವ ಕೃಷಿಕ ಸಮೂಹ ತಲೆಮಾರುಗಳಿಂಲೂ ಹುರುಳಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ‘ ಎನ್ನುತ್ತಾರೆ ಹುರುಳಿ ಬೆಳೆಗಾರ ಬಸಣ್ಣ ಹೊಗರಿ.

‘ಕಡಿಮೆ ತೇವಾಂಶ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ನೀಡುವ ಬೆಳೆ ಹುರುಳಿ. ಮಾರು­ಕಟ್ಟೆಯಲ್ಲಿ ಸ್ಥಿರತೆ. ಕೃಷಿ ಕಾರ್ಮಿಕರ ಬಳಕೆ ಕಡಿಮೆ. ಅಲ್ಲದೆ ಪೋಷ್ಠಿಕಾಂಶ ಉಳ್ಳ ಆಹಾರ. ಹೀಗಾಗಿ ಮಸಾರಿ ಪ್ರದೇಶದ ಕೃಷಿಕರ ನೆಚ್ಚಿನ ಬೆಳೆಗಳಲ್ಲಿ ಹುರುಳಿಗೆ ಅಗ್ರಸ್ಥಾನವಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್‌.ಎ.ಸೂಡಿಶೆಟ್ಟರ್‌ ತಿಳಿಸಿದರು.
-ಚಂದ್ರಕಾಂತ ಬಾರಕೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT