ಚನ್ನರಾಯಪಟ್ಟಣ: ತಾಲ್ಲೂಕಿನ ವಿವಿಧೆಡೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಚೆಗೆ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 3.49 ಲಕ್ಷ ಮೌಲ್ಯದ 166 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಮಾವನೂರಿನ ಪ್ರದೀಪ, ಪ್ರಕಾಶ್, ಕಾಂತರಾಜು ಬಂಧಿತರು. ಇವರು ತಾಲ್ಲೂಕಿನ ನಾಗಸಮುದ್ರ, ಆನೇಕೆರೆ, ಡಿ. ಸಮುದ್ರವಳ್ಳಿ, ಯಲಿಯೂರು, ಹಿರೀಸಾವೆ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಉಲಿವಾಲ ಗ್ರಾಮಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು. ಇವರು ಡ್ರಾಪ್ ಮಾಡುವ ಅಥವಾ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗುತ್ತಿದ್ದರು. ಕದ್ದ ಸರವನ್ನು ಕರಗಿಸಿ ಮಾರುತ್ತಿದ್ದರು. ಕೃತ್ಯಕ್ಕೆ ಬಳಸಲಾಗಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಠಾಣೆ ಪಿಎಸ್ಐ ಸಿ. ವೆಂಕಟೇಶ್ ಶುಕ್ರವಾರ ತಿಳಿಸಿದ್ದಾರೆ.