ಬಳ್ಳಾರಿ: ಇತ್ತೀಚೆಗೆ ನಿಧನರಾದ ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಕನ್ನಡ ಕ್ರಾಂತಿದಳದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಇತ್ತೀಚೆಗೆ ನಡೆಯಿತು.
ಮೇಯರ್ ಪಾರ್ವತಿ ಇಂದುಶೇಖರ್ ಮಾತನಾಡಿ, ಡಾ.ವಿ.ಎಸ್. ಆಚಾರ್ಯ ಅವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಬಾಲ್ಯದಲ್ಲಿ ಆರ್ಎಸ್ಎಸ್ ಸೇರಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು, ನಂತರ ಜನಸಂಘದ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ ಮಾತನಾಡಿ, ಡಾ.ವಿ.ಎಸ್. ಆಚಾರ್ಯ ಅವರು ರಾಜ್ಯ ಸರ್ಕಾರದ ಅನೇಕ ಮಂತ್ರಿಗಳಿಗೆ ಉತ್ತಮ ಸಲಹೆಗಾರರಾಗಿದ್ದರು. ರಾಜ್ಯ ಬಜೆಟ್ ಮಂಡನೆ ವೇಳೆ ಜನಪರ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಎಂದು ನೆನಪಿಸಿದರು.
ಡಾ.ವಿ.ಎಸ್. ಆಚಾರ್ಯ ಅವರಂತಹ ಪಕ್ಷದ ಹಿರಿಯ ಧುರೀಣನನ್ನು ಕಳೆದುಕೊಂಡಿರುವ ಬಿಜೆಪಿ ನಿಜಕ್ಕೂ ಅನಾಥಪ್ರಜ್ಞೆ ಅನುಭವಿಸುತ್ತಿದೆ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ವಿನೋದ್ಕುಮಾರ್ ತಿಳಿಸಿದರು.
ನಗರಸಭೆ ಸದಸ್ಯ ಎ.ಎಂ. ಸಂಜಯ್ ಹಾಗೂ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸುರೇಶ ಶೆಟ್ಟಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ, ನಗರಸಭೆ ಮಾಜಿ ಸದಸ್ಯ ಜಿ.ರಾಮಚಂದ್ರಯ್ಯ, ಕರ್ನಾಟಕ ಭೋವಿ (ವಡ್ಡರ) ಯುವಸೇನೆ ಅಧ್ಯಕ್ಷ ಗಿರಿಧರ್, ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಸಂಘದ ಗೋವರ್ಧನ, ಗೋನಾಳ್ ಮುರಾರಿಗೌಡ, ಡುಂಗರ್ ಚಂದ್ರಿ, ಕಾರ್ಮಿಕ ಮುಖಂಡ ಹಂಪೇರು ಹಾಲೇಶ್ವರಗೌಡ, ರಾಜಗೋಪಾಲ ಸ್ವಾಮಿ, ಗುರುರಾಜ್, ಅಸುಂಡಿ ಮಲ್ಲಿಕಾರ್ಜುನ ರೆಡ್ಡಿ, ರಾಮು ಸಾಹುಕಾರ್, ಸಮೀರ್ ಸೇಟ್, ಬ್ರಾಹ್ಮಣ ಸಂಘರ್ಷ ಸಮಿತಿಯ ವಿಜಯ ವಿಠ್ಠಲ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಕುಂದಾಪುರ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.