ತುಮಕೂರು: ವಿದ್ಯೆಗಿಂತ ವಿದ್ವತ್ ದೊಡ್ಡದು ಎಂದು ಶಿಶುನಾಳ ಶರೀಫರ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂರ್ತಿ ಇಲ್ಲಿ ಶುಕ್ರವಾರ ಹೇಳಿದರು.
ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ `ಸಾಂಸ್ಕೃತಿಕ ಹಬ್ಬ~ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಶುನಾಳ ಶರೀಫರ ಪ್ರತಿಯೊಂದು ಹಾಡಿನಲ್ಲಿ ವಿದ್ವತ್ ಅಡಗಿದೆ. ಜಾತಿ, ಧರ್ಮ ತೊಡೆದು ಹಾಕಿ ಏಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಸದಾಚಾರ, ಸಂಸ್ಕಾರ, ಸರಳತೆ ರೂಢಿಸಿಕೊಳ್ಳುವುದರ ಜೊತೆಗೆ ಉತ್ತಮ ನಾಗರಿಕರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಚ್.ಎಸ್.ನಿರಂಜನಾರಾಧ್ಯ ಮಾತನಾಡಿ, 2030ರ ವೇಳೆಗೆ ಭಾರತ ಪ್ರಪಂಚದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಅಮೆರಿಕದಲ್ಲಿ ನೆಮ್ಮದಿ ಮತ್ತು ಸಂತೋಷ ಕಡಿಮೆಯಾಗುತ್ತಿದೆ. ಆದರೆ ಹಿಂದುಳಿದ ರಾಷ್ಟ್ರವಾದ ನೇಪಾಳದ ಜನರು ಹೆಚ್ಚು ನೆಮ್ಮದಿ ಹೊಂದಿದ್ದಾರೆ ಎಂದು ತಿಳಿಸಿದರು.
ಸಿದ್ದಗಂಗಾ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ನಾಗಭೂಷಣ್, ಉಪನ್ಯಾಸಕ ವೈದ್ಯೇಶ್ವರ ಮಾತನಾಡಿದರು. ಪ್ರೊ.ದಾಕ್ಷಾಯಣಿ ಪ್ರಕಾಶ್ ಸ್ವಾಗತಿಸಿದರು. ಪ್ರೊ.ಪಿ.ರಾಘವೇಂದ್ರ ನಿರೂಪಿಸಿದರು. ಪ್ರೊ.ಕೆ.ಸಿ.ಜಯಸ್ವಾಮಿ ವಂದಿಸಿದರು.
ವಿದ್ಯಾರ್ಥಿಗಳಿಂದ ರಂಗೋಲಿ, ಮೆಹಂದಿ, ಪ್ರಬಂಧ ಮತ್ತು ರಸ ಪ್ರಶ್ನೆ ಸ್ಪರ್ಧೆ, ಫ್ಯಾಷನ್ ಶೋ ಮತ್ತಿತರ ಕಾರ್ಯಕ್ರಮಗಳು ನಡೆದವು.