ಧಾರವಾಡ: ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿಖಾನ್ ಅವರಿಗೆ ಮಂಗಳವಾರ ಇಲ್ಲಿಗೆ ಸಮೀಪದ ಸತ್ತೂರಿನ ಡಾ. ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸಮ್ಮಾನವನ್ನು ಪ್ರದಾನ ಮಾಡಲಾಯಿತು.
ಕರ್ನಾಟಕ ಸರ್ಕಾರ ಸ್ಥಾಪಿಸಿರುವ ~ಡಾ. ಮ್ಲ್ಲಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಟ್ರಸ್ಟ್~ ವತಿಯಿಂದ ನೀಡಲಾದ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಪ್ರಶಸ್ತಿಯನ್ನು ಸಂಸದ ಪ್ರಹ್ಲಾದ ಜೋಶಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಚುಟುಕು ಭಾಷಣ ಮಾಡಿದ ಅಮ್ಜದ್ ಅಲಿಖಾನ್, ~ಇಂದು ಸಂಗೀತವೂ ಸಾಂಸ್ಥೀಕರಣಗೊಳ್ಳುತ್ತಿದೆ. ಮೊದಲಿದ್ದ ಗುರುಕುಲ ಪದ್ಧತಿಯ ಶಿಕ್ಷಣ ಈಗ ಇಲ್ಲ. ಗುರುಕುಲದಲ್ಲಿ ಗುರುವಿನ ಆಶೀರ್ವಾದ ಸಿಗುತ್ತದೆ. ಸಂಸ್ಥೆಯಲ್ಲಿ ಪ್ರಮಾಣಪತ್ರವಷ್ಟೇ ದೊರೆಯುತ್ತದೆ~ ಎಂದು ಮಾರ್ಮಿಕವಾಗಿ ನುಡಿದರು.
~ಸಂಗೀತವು ಎಲ್ಲರಿಗೂ ಸೇರಿದ್ದು ಮತ್ತು ಅದು ಎಲ್ಲರಿಂದಲೂ ಪ್ರೀತಿಸಲ್ಪಡುತ್ತದೆ. ಸಂಗೀತ ದಿಗ್ಗಜ ಪಂ.ಮಲ್ಲಿಕಾರ್ಜುನ ಅವರ ಹೆಸರಲ್ಲಿ ನೀಡಲಾದ ಈ ಪ್ರಶಸ್ತಿಯನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ~ ಎಂದರು.
ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಟ್ರಸ್ಟ್ ಅಧ್ಯಕ್ಷ ಜಿಲ್ಲಾಧಿಕಾರಿ ದರ್ಪಣ ಜೈನ್, ಪಂ. ಮ್ಲ್ಲಲಿಕಾರ್ಜುನ ಮನ್ಸೂರ್ ಅವರ ಪುತ್ರ ಹಾಗೂ ಟ್ರಸ್ಟ್ ಸದಸ್ಯ ಡಾ.ರಾಜಶೇಖರ ಮನ್ಸೂರ್, ಪುತ್ರಿ ನೀಲಾ ಎಂ.ಕೊಡ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.