ನವದೆಹಲಿ (ಪಿಟಿಐ): ಸರ್ಕಾರ ರಚನೆಗೆ ತಾನು ಮುಂದಾಗುವುದಿಲ್ಲ ಎಂದು ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಗುರುವಾರ ಸ್ಪಷ್ಟವಾಗಿ ತಿಳಿಸಿರುವುದರಿಂದ, ದೆಹಲಿ ಗದ್ದುಗೆ ಹಿಡಿಯಲು ಹೊಸದಾಗಿ ಚುನಾವಣೆ ನಡೆಸುವ ಸಾಧ್ಯತೆಗಳು ಮತ್ತಷ್ಟು ನಿಚ್ಚಳವಾದಂತಾಗಿದೆ.
ಸರ್ಕಾರ ರಚನೆಗೆ ಆಹ್ವಾನ ನೀಡಿದ ದೆಹಲಿ ಲೆ.ಗವರ್ನರ್ ಅವರ ಜತೆ ಗುರುವಾರ ಸಮಾಲೋಚನೆ ನಡೆಸಿದ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಹರ್ಷವರ್ಧನ್, ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿತ್ತು. ಅಗತ್ಯ ಬಹುಮತ ಇರದ ಕಾರಣ ನಾವು ವಿರೋಧ ಪಕ್ಷದ ಸ್ಥಾನದಲ್ಲೇ ಕೂರುತ್ತೇವೆ’ ಎಂದು ಲೆ.ಗವರ್ನರ್ಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದರು.
70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಬಿಜೆಪಿ ತನ್ನ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ಒಬ್ಬ ಶಾಸಕ ಸೇರಿ ಒಟ್ಟು 32 ಸ್ಥಾನಗಳ ಬಲ ಹೊಂದಿದ್ದರೆ, ಆಮ್ ಆದ್ಮಿ ಪಾರ್ಟಿ (ಎಎಪಿ) 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿವೆ. ಜೆಡಿ(ಯು) ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಜಯ ಗಳಿಸಿವೆ.
ಬಿಜೆಪಿ ಇಲ್ಲವೆ ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚನೆ ಮಾಡುವುದಕ್ಕಿಂತ ಹೊಸದಾಗಿ ಚುನಾವಣೆಯನ್ನು ನಡೆಸುವುದಕ್ಕೆ ತಮ್ಮ ಪಕ್ಷ ಆದ್ಯತೆ ನೀಡುತ್ತದೆ ಎಂದು ಎರಡನೇ ಅತಿ ದೊಡ್ಡ ಪಕ್ಷ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬುಧವಾರವಷ್ಟೆ ಸ್ಪಷ್ಟಪಡಿಸಿರುವುದರಿಂದ ಸರ್ಕಾರ ರಚನೆ ವಿಷಯ ಕಗ್ಗಂಟಾಗಿದೆ.
ಎಎಪಿಗೆ ಬೆಂಬಲ: ಕಾಂಗ್ರೆಸ್:ಈ ನಡುವೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ನವದೆಹಲಿಯಲ್ಲಿ ಹೇಳಿಕೆ ನೀಡಿದ್ದು, ಎಎಪಿಗೆ ಬೆಂಬಲ ನೀಡುವ ವಿಷಯ ‘ಪರಿಶೀಲನೆಯಲ್ಲಿದೆ’ ಎಂದು ತಿಳಿಸಿದ್ದಾರೆ.
ಪಕ್ಷದ ಎಂಟು ಜನ ಶಾಸಕರ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ರಾಹುಲ್ ಉತ್ತರಿಸಿದರು.
ಎಎಪಿಗೆ ಆಹ್ವಾನ
ಎರಡನೇ ಅತಿ ಹೆಚ್ಚು ಸ್ಥಾನ ಗಳಿಸಿದ ಎಎಪಿಗೆ ಲೆ. ಗವರ್ನರ್ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಶನಿವಾರ ಈ ಸಂಬಂಧ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.