ನವದೆಹಲಿ (ಐಎಎನ್ಎಸ್): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮ ದಿನಾಂಕ ವಿವಾದಕ್ಕೆ ಸಂಬಂಧಿಸಿದಂತೆ ಅವರ ಮತ್ತು ಸರ್ಕಾರದ ನಡುವೆ ಉಂಟಾಗಿರುವ ಕಾನೂನು ಸಮರವು ಒಂದು `ಅನಾರೋಗ್ಯಕರ ಸಂಪ್ರದಾಯ~ಕ್ಕೆ ಕಾರಣವಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಎಂ.ಎಂ. ಪಲ್ಲಂರಾಜು ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.
`ಇದು ಸಚಿವಾಲಯಕ್ಕಾಗಲೀ ಅಥವಾ ಸೇನಾಪಡೆಗಳಿಗಾಗಲೀ ಆರೋಗ್ಯಕಾರಿ ಸಂಪ್ರದಾಯವಲ್ಲ. ಅಲ್ಲದೆ, ಇದು ಸಾರ್ವಜನಿಕ ಚರ್ಚೆಯ ವಿಷಯವೂ ಅಲ್ಲ. ಇದೊಂದು ಅನಾರೋಗ್ಯಕರ ಬೆಳವಣಿಗೆಯಷ್ಟೇ~ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರಕ್ಕೆ ಜೇಟ್ಲಿ ತರಾಟೆ (ಮುಂಬೈ ವರದಿ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನ ವಿವಾದವನ್ನು ಬಗೆಹರಿಸುವಲ್ಲಿ ಯುಪಿಎ ಸರ್ಕಾರ ವಿಫಲವಾಗಿದ್ದು, ಸರಿಯಾದ ರಾಜನೀತಿಜ್ಞತೆ ಅನುಸರಿಸಿಲ್ಲ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಬುಧವಾರ ಇಲ್ಲಿ ಟೀಕಿಸಿದರು.
ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ, `ಸರ್ಕಾರವು ತೆರೆಯ ಮರೆಯಲ್ಲಿ ಈ ವಿವಾದವನ್ನು ಬಗೆಹರಿಸಲು ರಾಜನೀತಿಜ್ಞತೆಯನ್ನು ಅನುಸರಿಸಬೇಕಾಗಿತ್ತು ಎಂದರು.