ಲಿಂಗಸುಗೂರು(ಮುದಗಲ್ಲು): ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರ ಹಿತ ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಹಮಾಲಿ ಕಾರ್ಮಿಕರ ಸಂಘ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ರೈತರ ಬೆಳೆಗೆ ಬೆಂಬಲ ಬೆಲೆ ನೀಡದೆ ಇರುವುದರಿಂದಾಗಿ ಆತ್ಮಹತ್ಯೆಯಂಥ ಪ್ರಕರಣ ನಡೆಯುತ್ತಿವೆ. ರೈತ ಎದುರಿಸುತ್ತಿರುವ ತೊಂದರೆಗಳಿಂದ ಕೃಷಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.
ತಾಲ್ಲೂಕಿನ ನಂದವಾಡಗಿ ಏತ ನೀರಾವರಿ ಯೋಜನೆ ಜಾರಿ ಆಗಬೇಕು. ಸರ್ಕಾರಿ ಜಮೀನು ಸಾಗುವಳಿದಾರರ ಅರ್ಜಿ ಪಡೆಯಬೇಕು. ಅಕ್ರಮ ಸಕ್ರಮ ಜಾರಿಗೊಳಿಸಬೇಕು. ಭೂ ರಹಿತರಿಗೆ ಸರ್ಕಾರಿ ಜಮೀನು ಮಂಜೂರು ಮಾಡುವುದು ಸೇರಿದಂತೆ ರೈತ ಹಾಗೂ ಕೃಷಿ ಕೂಲಿಕಾರ್ಮಿಕರ ಹಿತ ಕಾಯುವ ಯೋಜನೆಗಳ ಜಾರಿಗೆ ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಹನುಮಂತ ಕಾರಲಕುಂಟಿ. ದೇವದಾಸಿ ಮಹಿಳಾ ವಿಮೋಚನಾ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಪರಶುರಾಮ, ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ರಂಗನಾಥ ಹಟ್ಟಿ. ಹಮಾಲರ ಸಂಘದ ಮುದಗಲ್ಲು ಘಟಕದ ಅಧ್ಯಕ್ಷ ದೌಲಸಾಬ ಮುದಗಲ್ಲು.
ಮುಖಂಡರಾದ ಹುಲಿಗೆಮ್ಮ ಕುದುರಿ, ಗುರುಪಾದಪ್ಪ ಹಟ್ಟಿ, ಶಿವಪ್ಪ ವ್ಯಾಕರನಾಳ, ಗೋಪಾಲ ನಾಯಕ, ಆಂಜನೇಯ ನಾಗಲಾಪುರ, ಪರಶುರಾಮ ಗೊರೆಬಾಳ, ಭದ್ರಪ್ಪ ನಾಗಲಾಪುರ, ರಮೇಶ, ಗದ್ದೆಪ್ಪ, ಸರೋಜ, ರತ್ನಮ್ಮ, ಮುತ್ತಮ್ಮ, ಹುಲಿಗೆಮ್ಮ ಮತ್ತಿತರರು ಪಾಲ್ಗೊಂಡಿದ್ದರು. ಎಎಸ್ಐ ಖಾನಸಾಬ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.