ನವದೆಹಲಿ (ಪಿಟಿಐ): ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಅಫ್ಜಲ್ ಗುರು ಸೇರಿದಂತೆ ಮರಣದಂಡನೆಗೆ ಒಳಗಾಗಿರುವ 13 ಜನರ ಕ್ಷಮಾದಾನದ ಅರ್ಜಿಗಳು ಪ್ರಸ್ತುತ ಸರ್ಕಾರದ ಪರಿಶೀಲನೆಯಲ್ಲಿ ಇದೆ.
ಈ ವಿಚಾರವನ್ನು ಗೃಹಖಾತೆ ರಾಜ್ಯ ಸಚಿವ ಎಂ. ರಾಮಚಂದ್ರನ್ ಲೋಕಸಭೆಗೆ ಮಂಗಳವಾರ ತಿಳಿಸಿದರು. ಕ್ಷಮಾದಾನ ಅರ್ಜಿ ಸಲ್ಲಿಸಿದವರ ಪೈಕಿ ಸೈಮನ್ಜ್ಞಾನಪ್ರಕಾಶ್, ಮಾದಯ್ಯ, ಬಿಲವೇಂದ್ರ, ಪ್ರವೀಣ್ ಕುಮಾರ್, ಸಾಯ್ಬಣ್ಣ ಮತ್ತು ಬಿ.ಎ.ಉಮೇಶ್ರೆಡ್ಡಿ ಕರ್ನಾಟಕದವರಾಗಿದ್ದಾರೆ.
ಉಳಿದಂತೆ ಅಫ್ಜಲ್ ಗುರು (ದೆಹಲಿ) ಗುರ್ಮಿತ್ ಸಿಂಗ್, ಜಾಫರ್ ಅಲಿ, ಸುರೇಶ್ ಮತ್ತು ರಾಮ್ಜಿ (ಉತ್ತರ ಪ್ರದೇಶ), ಧರಂ ಪಾಲ್, ಸೋನಿಯಾ ಮತ್ತು ಸಂಜೀವ್ (ಹರಿಯಾಣ) ಅವರ ಕ್ಷಮಾದಾನದ ಅರ್ಜಿಗಳ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.
ಇವರ ಹೊರತಾಗಿ ಸುಂದರ್ ಸಿಂಗ್ (ಉತ್ತರಾಖಂಡ), ಬಲ್ವಂತ್ ಸಿಂಗ್ ರಾಜೋನಾ (ಚಂಡೀಗಡ) ಹಾಗೂ ಮಗನ್ಲಾಲ್ (ಮಧ್ಯಪ್ರದೇಶ) ಅವರ ಅರ್ಜಿಗಳನ್ನು ಸಹ ಸರ್ಕಾರ ಪರಿಶೀಲಿಸುತ್ತಿದೆ. 2009ರಿಂದ ಈವರೆಗೆ 24 ಕ್ಷಮಾದಾನದ ಅರ್ಜಿಗಳನ್ನು ಸರ್ಕಾರ ವಿಲೇವಾರಿಗೊಳಿಸಿದೆ. ಅವುಗಳಲ್ಲಿ ನವೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಲಾದ ಪಾಕ್ ಮೂಲದ ಉಗ್ರ ಅಜ್ಮಲ್ ಕಸಾಬ್ ಅರ್ಜಿಯೂ ಒಂದಾಗಿದೆ ಎಂದು ರಾಮಚಂದ್ರನ್ ಹೇಳಿದರು.