ಲಖನೌ (ಪಿಟಿಐ/ ಐಎಎನ್ಎಸ್): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆದಿ ರುವ ಎಲ್ಲಾ ದೊಡ್ಡ ಕೋಮುಗಲಭೆ ಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅಲಹಾಬಾದ್ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ಎಂಬುವವರು ಈ ಸಂಬಂಧ ಸೆ.11ರಂದು ಪಿಐಎಲ್ ಸಲ್ಲಿಸಿದ್ದರು. ಮುಜಾಫರ್ನಗರ ಗಲಭೆ ಕುರಿತ ತನಿಖೆಗೆ ರಚಿಸಲಾಗಿರುವ ನ್ಯಾ. ಸಹಾಯ್ ಆಯೋಗವನ್ನು ಎಲ್ಲಾ ದೊಡ್ಡ ಕೋಮುಗಲಭೆಗಳ ತನಿಖೆಗೆ ವಿಸ್ತರಿಸಬೇಕು ಎಂದೂ ನೂತನ್ ಅವರು ಕೋರಿದ್ದಾರೆ.
ಸೇನೆ ಹಿಂದಕ್ಕೆ: ಇದೇ ವೇಳೆ, ಕೋಮುಗಲಭೆಯಿಂದ ತತ್ತರಿಸಿದ್ದ ಮುಜಾಫರ್ನಗರ ಜಿಲ್ಲೆ ಸಹಜ ಸ್ಥಿತಿಗೆ ಮರಳಿರುವುದರಿಂದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೇನಾ ಸಿಬ್ಬಂದಿಯನ್ನು ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ.
ಮತ್ತೊಂದೆಡೆ, ಹಿರಿಯ ಪೊಲೀಸ್ ಅಧಿಕಾರಿಗಳಿರುವ ವಿಶೇಷ ದಳ ಗಲಭೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಮಂಗಳವಾರ ಆರಂಭಿಸಿದೆ.
ಉತ್ತರ ಪ್ರದೇಶ ಸರ್ಕಾರದ ಸೂಚನೆಯ ಮೇರೆಗೆ ತನಿಖಾ ದಳ ರಚಿಸಲಾಗಿದ್ದು, ಪುರಾವೆಗಳ ಸಂಗ್ರಹ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
4,729 ಕುಟುಂಬಗಳ 7,198 ಜನರು ಸದ್ಯ ವಿವಿಧ ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದು, ಈತನಕ 1,700 ಆಯುಧ ಪರವಾನಿಗೆಗಳನ್ನು ರದ್ದು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.