ನವದೆಹಲಿ (ಪಿಟಿಐ): ‘ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ. ಆದರೆ ಅದು ಜರ್ರನೆ ಕೆಳಗಿಳಿಯುವಂತೆ ಮಾಡಲು ಸರ್ಕಾರದ ಬಳಿ ಯಾವ ಜಾದೂ ದೀಪವೂ ಇಲ್ಲ’ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
‘ಕೈಯಲ್ಲಿ ಉಜ್ಜಿದ ಕೂಡಲೇ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಬಿಡುವಂತಹ ಮಂತ್ರದಂಡ ಅಥವಾ ಅಲ್ಲಾವುದ್ದೀನನ ಜಾದೂ ದೀಪವನ್ನು ಸರ್ಕಾರ ಹೊಂದಿಲ್ಲ.ವಿತ್ತೀಯ ನೀತಿ ಬಿಗಿಗೊಳಿಸುವುದೂ ಸೇರಿದಂತೆ ಹಣದುಬ್ಬರ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹಣ್ಣು, ಹಾಲು, ಮಾಂಸ, ಮೊಟ್ಟೆಯ ಅಧಿಕ ಬೆಲೆ ಏರಿಕೆಯಿಂದಾಗಿ ಜನವರಿ 22ರ ಹೊತ್ತಿಗೆ ಆಹಾರದ ಹಣದುಬ್ಬರ ಶೇ 17ನ್ನು ದಾಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಏರಿಕೆಯ ನಿರೀಕ್ಷೆಯನ್ನೂ ಈ ಬೆಳವಣಿಗೆ ಮಸುಕಾಗಿಸುತ್ತಿದೆ.