ಭಾಲ್ಕಿ: ಸರ್ಕಾರವು ಜನಸಾಮಾನ್ಯರಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಅಧಿಕಾರಿಗಳು ಸಕಾಲಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದ ಜನರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಂಪೂರ್ಣ ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಇಂಥ ವಿಚಾರದಲ್ಲಿ ನಿರ್ಲಕ್ಷ್ಯತೆ ತೋರಿದರೆ ಸಹಿಸಲಾಗುವುದಿಲ್ಲ ಎಂದರು. ಹೆಣ್ಣು ಮಕ್ಕಳ ಭದ್ರತೆ, ಸುರಕ್ಷತೆ ಮತ್ತು ಸಾಕ್ಷರತೆಯ ದೃಷ್ಟಿಯಿಂದ ಜಾರಿಗೆ ಬಂದಿರುವ ಭಾಗ್ಯಲಕ್ಷ್ಮಿ ಯೋಜನೆಯು ಬಡವರ ಭಾಗ್ಯವನ್ನೇ ತೆರೆದಿದೆ ಎಂದು ಬಣ್ಣಿಸಿದರು.
800 ಜನರಿಗೆ ಬಾಂಡ್ ವಿತರಿಸಲಾಯಿತು. ತಾಪಂ ಅಧ್ಯಕ್ಷೆ ಶಿಲ್ಪಾರಾಣಿ ಬಿರಾದಾರ ಉದ್ಘಾಟಿಸಿದರು. ಉಪಾಧ್ಯಕ್ಷ ಮಾದಪ್ಪ ಬಿರಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಾಂಗದ ವಾಡೇಕರ್, ಕಲ್ಲಪ್ಪ, ತಾರಾಬಾಯಿ ಕೊಳ್ಳಾ, ಜಯಶ್ರೀ ಮಾನಕರಿ, ಪುರಸಭೆ ಸದಸ್ಯ ವಿಶ್ವನಾಥ ಮೋರೆ, ಸುಕನ್ಯಾ, ಶ್ರಾವಣಕುಮಾರ ಗಾಯಕ ವಾಡ, ವಿಲಾಸ ಮೋರೆ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್ ನಾಯ್ಕರ್ ಮುಂತಾದವರು ಇದ್ದರು. ಸಿಡಿಪಿಓ ಜಗನ್ನಾಥ ಗಾದಾ ಸ್ವಾಗತಿಸಿದರು.