ಮಾನ್ವಿ: ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತ ಪ್ರಯತ್ನ ಅಗತ್ಯ. ಆರ್ಯವೈಶ್ಯ ಸಮಾಜ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಅಗತ್ಯವಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಿರೀಶ ಪೆಂಡಕೂರ ಹೇಳಿದರು.
ಭಾನುವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಯವೈಶ್ಯ ಸಮಾಜದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಯವೈಶ್ಯ ಸಮಾಜದವರು ತಮ್ಮ ವೃತ್ತಿಯ ಜತೆಗೆ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಸಂಭವಿಸಿದಾಗ ನೆರೆಸಂತ್ರಸ್ತರ ಸಹಾಯಕ್ಕಾಗಿ ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ನೆರವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಎಂದು ಗಿರೀಶ ಪೆಂಡಕೂರ ಹೇಳಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಹಿರಿಯ ಉಪಾಧ್ಯಕ್ಷ ಕುಂಟ್ನಾಳ ವೆಂಕಟೇಶ ಮಾತನಾಡಿ, ಆರ್ಯವೈಶ್ಯ ಸಮಾಜದ ಬಡವರಿಗೆ ಆರ್ಥಿಕ ನೆರವು ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಅಗತ್ಯ ನೆರವು ನೀಡಲು ಮಹಾಸಭಾ ಸಿದ್ಧವಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕಲ್ಯಾಣ ಯೋಜನೆಗಳ ಸಮಿತಿ ಮುಖ್ಯಸ್ಥ ವೀರಣ್ಣ ಮುದಗಲ್, ಆರ್ಯವೈಶ್ಯ ಸಮಾಜದ ನೂತನ ಜಿಲ್ಲಾಧ್ಯಕ್ಷ ಮನ್ಸಾಲಿ ವೆಂಕಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮಿನ್, ಮಾನ್ವಿ ನಗರೇಶ್ವರ ಆರ್ಯವೈಶ್ಯ ಸಂಘದ ಅಧ್ಯಕ್ಷ ಆರ್.ಶಿವಶಂಕರ ಶೆಟ್ಟಿ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಆರ್ಯವೈಶ್ಯ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿ, ಕೊಂಡಾ ಕೃಷ್ಣಮೂರ್ತಿ ರಾಯಚೂರು, ಜಿ.ಶ್ರೀನಿವಾಸ ಶೆಟ್ಟಿ, ಕೆ.ಭೀಮಾಶಂಕರ, ಎಮ್.ಎನ್.ಮೂರ್ತಿ, ಭೂಪಾಳ ಶ್ರೀನಿವಾಸ, ಗಾಣದಾಳ ಲಕ್ಷ್ಮೀಪತಿ, ದೇವನಪಲ್ಲಿ ವಾಸುದೇವ, ಎಮ್.ಆರ್.ರಾಚಯ್ಯ ಸಿಂಧನೂರು, ಮಾನ್ವಿ ನಗರೇಶ್ವರ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಅಮರೇಶ ಶೆಟ್ಟಿ, ಡಿ.ರಾಘವೇಂದ್ರ ಶೆಟ್ಟಿ, ಡಿ.ಸೇತುರಾಮ ಶೆಟ್ಟಿ ಮತ್ತಿತರರು ಇದ್ದರು. ವಿಮಲಾ ಹಾಗೂ ಸ್ವಪ್ನಾ ಪ್ರಾರ್ಥನೆ ಗೀತೆ ಹಾಡಿದರು. ಸತ್ಯನಾರಾಯಣ ಭಂಡಾರಿ ನಿರೂಪಿಸಿದರು. ಬಸವರಾಜ ಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.