ಚಿಂತಾಮಣಿ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.ನಗರದ ಗುರುಭವನದ ಆವರಣದಲ್ಲಿ ಬುಧವಾರ ಸಿಐಟಿಯು ನೇತೃತ್ವದಲ್ಲಿ ನಡೆದ ಕಾರ್ಮಿಕ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸರ್ಕಾರಗಳ ವಿಫಲ ನೀತಿಗಳಿಂದಾಗಿ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಸರ್ಕಾರಗಳ ಉದಾರೀಕರಣ ನೀತಿಯು ಕಾರ್ಮಿಕರು ಬೀದಿ ಪಾಲಾಗುವಂತಾಗಿದೆ ಎಂದು ಶ್ರೀರಾಮರೆಡ್ಡಿ ಟೀಕಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಕಾಯಿದೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ.
ರಾಜ್ಯದಲ್ಲಿ ಸುಮಾರು 40 ಲಕ್ಷ ಹಾಗೂ ದೇಶದಲ್ಲಿ 40 ಕೋಟಿ ಅಸಂಘಟಿತ ಕಾರ್ಮಿಕರು ಸೇವಾ ಭದ್ರತೆ ಹಾಗೂ ಕನಿಷ್ಠ ವೇತನವಿಲ್ಲದೆ ನರಳುತ್ತಿದ್ದಾರೆ ಎಂದು ಹೇಳಿದರು.ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನರಾಯಪ್ಪ, ಕಾರ್ಯದರ್ಶಿ ಸಿ.ಗೋಪಿನಾಥ್, ಖಾಸಗಿ ಸಾರಿಗೆ ವಾಹನ ನೌಕರರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ್, ಎನ್. ಬಾಲಾಜಿ, ಸುರೇಶ್, ಮುಖಂಡರಾದ ಲಕ್ಷ್ಮೀದೇವಮ್ಮ, ಕೃಷ್ಣಾರೆಡ್ಡಿ, ಮುನಿ ಕೃಷ್ಣಪ್ಪ, ಬಾಬುರೆಡ್ಡಿ, ರಹಮತ್ ಉಲ್ಲಾ, ಬಾಬಾಜಾನ್ ಇದ್ದಾರೆ.