ಕುಂದಾಪುರ: ರಾಜ್ಯದ ಹೆಚ್ಚಿನ ಸರ್ಕಾರಿಗಳಲ್ಲಿ ಕಚೇರಿಗಳಲ್ಲಿ ಮಧ್ಯ ವರ್ತಿಗಳೇ ದರ್ಬಾರ್ ಮಾಡುತ್ತಿದ್ದಾರೆ. ಕುರ್ಚಿಯ ಬಗ್ಗೆ ಕಾಳಜಿ ವಹಿಸಿರುವ ಬಿಜೆಪಿ ಮುಖಂಡರಿಗೆ ಸಾಮಾನ್ಯ ಜನರ ನೋವೇ ಅರ್ಥವಾಗಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಹೇಳಿದರು.
ಇಲ್ಲಿಗೆ ಸಮೀಪದ ಹಟ್ಟಿಯಂಗಡಿ ಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಎಂದೂ ಭ್ರಷ್ಟತೆಗೆ ಮಣಿ ಹಾಕಿಲ್ಲ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಆರಂಭದಿಂದಲೇ ರಾಜ್ಯದ ಖಜಾನೆ ಲೂಟಿ ಮಾಡುವವರ ಪರಿಚಯ ಮಾಡಲಾರಂಭಿಸಿದೆ ಎಂದು ಲೇವಡಿ ಮಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಇಲ್ಲಿನ ರಾಜಕಾರಣಿಗಳನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಶೀಲ, ಹಿಂದುಳಿದ ವರ್ಗದ ಘಟಕದ ಅಧ್ಯಕ್ಷ ವಿಜಯ ಪುತ್ರನ್, ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ತೋಟಬೈಲ್, ಸುರೇಶ್ ಶೆಟ್ಟಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಧ್ಯಕ್ಷ ರಾಜು, ಸುಬ್ರಾಯ ಹೆಬ್ಬಾರ್, ನಾಗರಾಜ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಗೋವಿಂದ ರಾಜ್ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರ ಮೊಗವೀರ, ದೇವಕಿ ಶೆಟ್ಟಿ, ಗಣೇಶ್ ಶೆಟ್ಟಿ, ಹರ್ಷೇಂದ್ರ ಹೆಬ್ಬಾರ್, ಶ್ರೀಕಾಂತ ಪುಜಾರಿ, ರಾಘವೇಂದ್ರ ಹೆಬ್ಬಾರ್, ರಾಜೇಶ್ ಭಂಡಾರ್, ಜಯಸೂರ್ಯ ಪೂಜಾರಿ, ಅಮೃತ ಪ್ರಶಾಂತ್ ಭಂಡಾರಿ, ಸುಶೀಲ ಶೆಟ್ಟಿ, ರಾಜು ಪೂಜಾರಿ, ಸುಬ್ರಾಯ ಹೆಬ್ಬಾರ್, ಶೇಖರ ಮೊಗವೀರ, ಸುಜಾತಾ ಶೆಟ್ಟಿ, ಪ್ರದೀಪ್ ಮೊಗವೀರ, ಸುಭಾಸ್ ಮೊಗವೀರ, ರಾಘವೇಂದ್ರ ಉಡುಪ, ನಾಗಮ್ಮ ಶೆಡ್ತಿ, ಸಂತೋಷ್ ಬಸ್ತಿ ಇತರರು ಕಾಂಗ್ರೆಸ್ ಸೇರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.