ಮೂಡುಬಿದಿರೆ: ಕಡಂದಲೆ ಗ್ರಾಮದ ಮುರ್ತುಗುಡ್ಡೆ ಎಂಬಲ್ಲಿ ಕಾರ್ಯಾ ಚರಿಸುತ್ತಿರುವ ಪೋಬ್ಸನ್ ಜಲ್ಲಿ ಉದ್ಯಮ ಪಾದೆ ಕಲ್ಲುಗಳನ್ನು ಒಡೆಯಲು ಬಳಸುವ ಪ್ರಬಲ ಸ್ಫೋಟಕಗಳು ಜನರನ್ನು ಆತಂಕಕ್ಕೀಡು ಮಾಡಿವೆ.
ಸುಮಾರು 15 ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪ್ರಕೃತಿ ನಿರ್ಮಿತ ಬೃಹತ್ ಪಾದೆಕಲ್ಲುಗಳನ್ನು ಸ್ಫೋಟಿಸಿ ದಿನವೊಂದಕ್ಕೆ 300ರಿಂದ 400 ಯುನಿಟ್ಗಳಷ್ಟು ಜಲ್ಲಿ ತಯಾರಿಸಲಾಗುತ್ತದೆ. ಇದರಿಂದಾಗಿ ಪಾದೆಕಲ್ಲು ಭೂಮಿಯ ಮೇಲ್ಮೈಯಿಂದ 150 ಅಡಿ ಆಳಕ್ಕೆ ಇಳಿದು ಭೂಗರ್ಭಕ್ಕೆ ಕೊಡಲಿಯೇಟು ಬಿದ್ದಿದೆ. ಗಣಿಗಾರಿಕೆಯಿಂದ ನಿತ್ಯ ಉತ್ಪತ್ತಿ ಯಾಗುವ ಟನ್ಗಟ್ಟಲೆ ಜಲ್ಲಿಹುಡಿ ಯನ್ನು ಹತ್ತಿರದ ಬಯಲು ಪ್ರದೇಶದಲ್ಲಿ ಶೇಖರಿಸಲಾಗುತ್ತಿದೆ. ಶೇಖರಣೆಗೆ ಜಾಗ ಸಾಲದಕ್ಕೆ ಹತ್ತಿರದಲ್ಲಿ ಎಕ್ರೆಗಟ್ಟಲೆ ಸರಕಾರಿ ಜಾಗವನ್ನು ಅತಿಕ್ರಮಿಸಿ ಜಲ್ಲಿ ಹುಡಿ ಹಾಕಿರುವುದರಿಂದ ಸರ್ಕಾರಿ ಸ್ಥಳದ ನೂರಾರು ಮರಗಳು ನಾಶ ವಾಗಿವೆ ಎಂದು ಸ್ಥಳೀಯ ಮುಂದಾಳು ಸಂತೋಷ್ ಶೆಟ್ಟಿ ಹೇಳಿದ್ದಾರೆ.
ಜಲ್ಲಿಹುಡಿ ಶೇಖರಣೆಗೊಂಡ ಹತ್ತಿರ ದಲ್ಲೆ ಶಾಂಭವಿ ನದಿಯ ಕವಲು ಹರಿ ಯುತ್ತಿದ್ದು ಜಲ್ಲಿಹುಡಿ ನದಿ ಸೇರಿ ನೀರನ್ನು ಕಲುಷಿತಗೊಳಿಸುತ್ತಿದೆ. ಸುತ್ಲಿನ ಕೃಷಿ ಭೂಮಿಯನ್ನು ಹಾಳು ಮಾಡಿ ರೈತರು ತೊಂದರೆ ಅನುಭವಿ ಸುತ್ತಿದ್ದಾರೆ. ಹಿಂದೆ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಿದ್ದರೆ ಈಗ ಒಂದು ಬೆಳೆ ತೆಗೆಯುವುದಕ್ಕೂ ತೊಂದರೆ ಆಗಿದೆ ಎಂದು ಕೃಷಿಕರಾದ ಪಾಂಡುರಂಗ ನಾಯಕ್, ಸಂಜೀವ ಪೂಜಾರಿ, ವಿಜಯ ಮೂಲ್ಯ ಅಳಲು ತೋಡಿ ಕೊಂಡಿದ್ದಾರೆ.
ನಿರಂತರ ಸ್ಫೋಟ ಹಾಗೂ ಜಲ್ಲಿ ಸಾಗಣೆ ಟಿಪ್ಪರ್ಗಳ ಓಡಾಟದಿಂದ ಕಡಂದಲೆ ಪಲ್ಕೆಯಿಂದ ಸುಬ್ರಹ್ಮಣ್ಯ ದೇವಸ್ಥಾನದ ವರೆಗಿನ ರಸ್ತೆ ಕೆಟ್ಟು ಹೋಗಿದೆ. ಟಿಪ್ಪರ್ಗಳ ನಿರಂತರ ಸಂಚಾರದಿಂದ ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಭಯ ಪಡುತ್ತಿದ್ದಾರೆ.
ಪರವಾನಗಿ ಇಲ್ಲ: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಈ ಜಲ್ಲಿ ಕ್ರಷರ್ನ ಪರವಾನಿಗೆಯನ್ನು ಪಾಲಡ್ಕ ಗ್ರಾಮ ಪಂಚಾಯಿತಿ 2 ವರ್ಷದಿಂದ ನವೀಕರಿಸಿಲ್ಲ. ಆದರೂ ಗಣಿಗಾರಿಕೆ ನಡೆಯುತ್ತಲೆ ಇದೆ. ಕಂಪೆನಿಗೆ 7.71 ಎಕ್ರೆ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದ್ದು ಅದಕ್ಕಿಂತ ಹೆಚ್ಚು ಎಕ್ರೆಗಟ್ಟಲೆ ಸರಕಾರಿ ಜಮೀನನನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಣ್ಯಾಧಿಕಾರಿಗಳಿಂದ ಪರಿಶೀಲನೆ: ಕ್ರಷರ್ ವಿರುದ್ಧ ಗ್ರಾಮಸ್ಥರು ದ.ಕ ಜಿಲ್ಲಾಧಿಕಾರಿಗೆ ನೀಡಿದ ದೂರಿನ ಹಿನ್ನೆಲೆ ಯಲ್ಲಿ ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿಶೋರ್ ಶೆಟ್ಟಿ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತು ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅರಣ್ಯ ಇಲಾಖೆ ಜಾಗ ಅತಿಕ್ರಮಣವಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.
ಜಂಟಿ ಸರ್ವೆ: ಪೋಬ್ಸನ್ ಕಂಪೆನಿ ಸರಕಾರಿ ಜಾಗ ಕಬಳಿಸಿದ ಆರೋಪದ ಬಗ್ಗೆ ತನಿಖೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಜಾಗದ ಬಗ್ಗೆ ಜಂಟಿ ಸರ್ವೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ಇದರ ಪ್ರಭಾರ ಉಪ ನಿರ್ದೇಶಕ ಹರೀಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.