ಬಳ್ಳಾರಿ: ತಾಲ್ಲೂಕಿನ ಮೋಕಾ ಗ್ರಾಮದಿಂದ ಬಳ್ಳಾರಿಗೆ ಆಗಮಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಕೆ.ಎ–32, ಎಫ್–1106 ಸಂಖ್ಯೆಯ ಈ ಬಸ್, ಮೋಕಾ ಬಸ್ ನಿಲ್ದಾಣದಿಂದ ಬಳ್ಳಾರಿಯತ್ತ ಹೊರಡಲು ಅಣಿಯಾಗುತ್ತಿದ್ದಂತೆಯೇ, ಚಾಲಕನ ಪಕ್ಕದಲ್ಲಿದ್ದ ಎಂಜಿನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತು. ತೀವ್ರ ಹೊಗೆ ಕಾಣಿಸಿಕೊಂಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್ನ ಎಂಜಿನ್ ಸ್ಥಗಿತಗೊಳಿಸಿ, ನೀರು ಸಿಂಪಡಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಬಸ್ನಲ್ಲಿ ಕೇವಲ ಐವರು ಪ್ರಯಾಣಿಕರು ಮಾತ್ರ ಇದ್ದರು.
ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಅವರೂ ಕೆಳಗಿಳಿದು ನೀರು ತಂದು ಸಿಂಪಡಿಸಿ ಚಾಲಕನಿಗೆ ಸಹಾಯ ಮಾಡಿದರು. ಇತ್ತೀಚೆಗೆ ಆಂಧ್ರದ ಪಾಲೆಂ ಹಾಗೂ ರಾಜ್ಯದ ಹಾವೇರಿ ಸಮೀಪ ನಡೆದಿರುವ ಬೆಂಕಿ ಆಕಸ್ಮಿಕದಂತೆ ಇಲ್ಲಿ ಯಾವುದೇ ದುರ್ಘಟನೆ ನಡೆದಿಲ್ಲ. ಎಂಜಿನ್ನಲ್ಲಿ ದೋಷ ಇದ್ದುದರಿಂದ ಹೊಗೆ ಕಾಣಿಸಿಕೊಂಡಿದೆ. ಚಾಲಕ ಹಾಗೂ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಅನಾಹುತ ಆಗಿಲ್ಲ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದುರ್ಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಘಟನೆ ನಡೆದ ಕೂಡಲೇ ಬಳ್ಳಾರಿಯಿಂದ ಮೆಕ್ಯಾನಿಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅಗತ್ಯ ದುರಸ್ತಿ ಕಾರ್ಯ ಪೂರೈಸಿದ್ದಾರೆ. ಈ ಬಸ್ಗೆ ಎರಡು ಬಾಗಿಲುಗಳಿದ್ದು, ಬೆಂಕಿ ಕಾಣಿಸಿಕೊಂಡರೂ ಪ್ರಯಾಣಿಕರಿಗೆ ಅಪಾಯ ಇಲ್ಲ. ಬಸ್ ಅನ್ನು ಎಂದಿನಂತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು.