ಗುಂಡ್ಲುಪೇಟೆ: ತಾಲ್ಲೂಕಿನ ಬನ್ನೀತಾಳಪುರ ಗ್ರಾಮದ ಬಳಿ ಇರುವ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದರೂ ಇದನ್ನು ತಡೆಯಲು ತಾಲ್ಲೂಕು ಆಡಳಿತ ವಿಫಲವಾಗಿದೆ.
ಬನ್ನೀತಾಳಪುರ ಗ್ರಾಮದ ಬಳಿ ಇರುವ ವಡ್ಡರಹಳ್ಳಿ ಎಲ್ಲೆಯ ಸರ್ಕಾರಿ ಭೂಮಿಯಲ್ಲಿ ಬೆಳಗಿನ ಜಾವ 6 ರಿಂದ 9 ಗಂಟೆಯವರೆಗೆ ಅಕ್ರಮವಾಗಿ ಮರಳು ತೆಗೆದು ಗುಡ್ಡೆ ಹಾಕಿ ನಂತರ ಟ್ರ್ಯಾಕ್ಟರ್ ಮೂಲಕ ಸಾಗಣೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸಿಲ್ಲ.
ನಿತ್ಯ ನೂರಾರು ಟ್ರ್ಯಾಕ್ಟರ್ಗಳಲ್ಲಿ ಮರಳಿನ ಸಾಗಣೆ ನಡೆದಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಪ್ರತಿ ಟ್ರ್ಯಾಕ್ಟರ್ಗೆ 2,800 ರಿಂದ 3,000 ಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಯಾವುದೇ ಶುಲ್ಕ ಪಾವತಿಸದ ಕಾರಣ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.