ಕರ್ನಾಟಕ ವಿಧಾನಸಭೆಯ ಕಲಾಪಗಳ ಪ್ರಸಾರಕ್ಕಾಗಿ ಸರ್ಕಾರದ ವಾಹಿನಿಯೊಂದನ್ನು ಆರಂಭಿಸುವ ಮಾತುಗಳು ಕೇಳಿ ಬರುತ್ತಿವೆ. ಸ್ಪೀಕರ್ ಬೋಪಯ್ಯ ಅವರು ಸರ್ಕಾರಿ ವಾಹಿನಿ ಆರಂಭವಾದರೂ ಖಾಸಗಿ ವಾಹಿನಿಗಳಿಗೂ ಅವಕಾಶ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಅವರ ಮಾತನ್ನು ನಂಬಬಹುದೇ?
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹಲವು ಸಚಿವರು ಅಕ್ರಮ, ಅನೈತಿಕ ಹಗರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೂ ತಮ್ಮದು ಪಾರದರ್ಶಕ ಸರ್ಕಾರ ಎಂದು ಬೊಬ್ಬೆ ಹಾಕುತ್ತ ಅಪಾರದರ್ಶಕ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಬಿಜೆಪಿ ಸರ್ಕಾರದ ಹಗರಣಗಳು ಬಹಿರಂಗವಾಗುವುದಕ್ಕೆ ಮಾಧ್ಯಮಗಳು ಮತ್ತು ಲೋಕಾಯುಕ್ತರು ಕಾರಣ. ಲೋಕಾಯಕ್ತ ವ್ಯವಸ್ಥೆಯನ್ನೇ ಸರ್ಕಾರ ದುಬಲಗೊಳಿಸಿದೆ. ಈಗ ಮಾಧ್ಯಮಗಳನ್ನು ನಿಷ್ಕ್ರಿಯಗೊಳಿಸಲು ಹೊರಟಿದೆ.
ಸರ್ಕಾರಿ ವಾಹಿನಿ ಆರಂಭವಾದರೆ ಸದನದ ಒಳಗೆ ಶಾಸಕರು ಏನು ಮಾಡಿದರೂ ಅದು ಬೆಳಕಿಗೆ ಬರುವುದಿಲ್ಲ ಎಂಬ ಹುನ್ನಾರವೇ ಸರ್ಕಾರಿ ವಾಹಿನಿ ಆರಂಭದ ಉದ್ದೇಶವಲ್ಲವೇ? ಈ ಬೆಳವಣಿಗೆಯನ್ನು ಪ್ರತಿಯೊಬ್ಬರೂ ವಿರೋಧಿಸಬೇಕು.