ಗಂಗಾವತಿ: ಸಾರ್ವಜನಿಕ ಸಾರಿಗೆ ಸಂಸ್ಥೆಯ ವಾಹನ ಸುಟ್ಟ ಪ್ರಕರಣದಲ್ಲಿನ ಆರೋಪಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಕಲಿ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಜುಬೇರ್ ಅಹ್ಮದ್ ಮತ್ತು ಸಹಾಯಕ ಗೋರುಖಾನಾಥ್ಗೆ ಇಲಾಖೆ ಕಾರಣ ಕೇಳಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಮದನ್ಗೋಪಾಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. 2 ವಾರದೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ರಾಜಸ್ತಾನದ ಜೋಧಪುರದಲ್ಲಿ 2012ರ ಜುಲೈ 13ರಂದು ಸಾರಿಗೆ ಸಂಸ್ಥೆ ಯ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದ. ಘಟನೆಯಿಂದ ಆಕ್ರೋಶಗೊಂಡ ಜನ ವಾಹನಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ನಗರದ ಜವಳಿ ವ್ಯಾಪಾರಿ ಬಾಬುಲಾಲ್ ಕೂಡ ಭಾಗಿಯಾಗಿದ್ದಾರೆ ಎಂದು ಮಾಹಿತಿ ಕಲೆ ಹಾಕಿದ ರಾಜಸ್ತಾನದ ಪೊಲೀಸರು ತನಿಖೆಯ ಭಾಗವಾಗಿ ನಗರಕ್ಕೆ ಆಗಮಿಸಿ ಸ್ಥಳಿಯ ಪೊಲೀಸರ ಸಹಕಾರದಿಂದ ತನಿಖೆ ಕೈಗೊಂಡಿದ್ದರು.
ಆದರೆ ಬಾಬುಲಾಲ್, ಜೋಧಪುರದಲ್ಲಿ ಘಟನೆ ನಡೆದ ದಿನವೇ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿ ವೈದ್ಯ ಜುಬೇರ್ ಅಹ್ಮದ್ ಅವರ ಸಹಿಯುಳ್ಳ ಪ್ರಮಾಣ ಪತ್ರವನ್ನು ರಾಜಸ್ತಾನದ ಪೊಲೀಸರಿಗೆ ನೀಡಿದ್ದಾರೆ. ಎರಡು ದಿನ ದಾಖಲಾದ ಬಾಬುಲಾಲ್ ಅವರಿಗೆ ನೀಡಿದ ಚಿಕಿತ್ಸೆ ಸೇರಿದಂತೆ ಯಾವೊಂದು ಮಾಹಿತಿ ಆಸ್ಪತ್ರೆಯ ದಾಖಲೆಗಳಲ್ಲಿ ಇರದಿರುವುದನ್ನು ಪತ್ತೆ ಹಚ್ಚಿದ ‘ಪ್ರಜಾವಾಣಿ’ ವರದಿ ಮಾಡಿತ್ತು.